ಬೆಂಗಳೂರು: ಈಗಾಗಲೇ ಸಿದ್ದಾವಾಗಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿವಾರು ಸಮೀಕ್ಷೆಯ ವರದಿಯನ್ನು ಕೂಡಲೇ ಸರ್ಕಾರಕ್ಕೆ ಸಲ್ಲಿಸಿ, ಅದನ್ನು ಬಿಡುಗಡೆಗೊಳಿಸಬೇಕೆಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಮನವಿ ಸಲ್ಲಿಸಿದೆ.
ಮಿಲ್ಲರ್ಸ್ ರಸ್ತೆಯ ದೇವರಾಜ ಅರಸು ಭವನಕ್ಕೆ ಭೇಟಿ ನೀಡಿದ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರ , ಆದಷ್ಟು ಶೀಘ್ರವಾಗಿ ವರದಿ ಬಿಡುಗಡೆ ಮಾಡಿ ನಂತರ ಅದನ್ನು ಅಂಗೀಕರಿಸಿ ರಾಜ್ಯದಲ್ಲಿ ಶೀಘ್ರ ಜಾರಿಗೆ ತರಬೇಕೆಂದು ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಪ್ರಬಲವಾಗಿರುವ ಸಮಾಜಗಳು ಇತ್ತೀಚಿನ ದಿನಗಳಲ್ಲಿ ತಮ್ಮನ್ನು 2ಎ ಮೀಸಲಾತಿ ಪಟ್ಟಿ ಸೇರ್ಪಡೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಿವೆ. ಸರ್ಕಾರವು ಕೂಡ ಒತ್ತಡಕ್ಕೆ ಓಗೊಟ್ಟು, ಸಂಪೂರ್ಣವಾಗಿ ಮೀಸಲಾತಿಗೆ ಒಳಪಡಿಸುವ ಆಶ್ವಾಸನೆ ನೀಡುತ್ತಿರುವುದು ಸರಿಯಲ್ಲ. ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಅಧಿನಿಯದ 1995ರ ಪ್ರಕಾರ, ಎಲ್ಲಾ ವೈಜ್ಞಾನಿಕ ವಿಧಿ - ವಿಧಾನಗಳನ್ನು ಅನುಸರಿಸದೇ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಬಲಿಷ್ಠ ಜಾತಿಯನ್ನು ಸೇರಿಸುವುದು ಸಾಮಾಜಿಕ ನ್ಯಾಯಕ್ಕೆ ಹಾಗೂ ಸಂವಿಧಾನಕ್ಕೆ ಬಗೆಯುವ ಅಪಚಾರ. ಯಾವುದೇ ಮುಂದುವರಿದ ಜಾತಿಗಳನ್ನು 2ಎ ಮೀಸಲಾತಿ ಪಟ್ಟಿಗೆ ಸೇರ್ಪಡೆ ಮಾಡಬಾರದು ಎಂದು ಒತ್ತಾಯಿಸಿದರು.
ವರ್ಗ ‘3ಎ’ ಮತ್ತು ‘3ಬಿ’ ಪಟ್ಟಿಯಲ್ಲಿರುವ ಕೆಲವು ಪ್ರಬಲ ಸಮುದಾಯಗಳು ಪ್ರವರ್ಗ ‘2ಎ’ ಅಡಿ ಮೀಸಲಾತಿ ನೀಡುವಂತೆ ಒತ್ತಾಯಿಸುತ್ತಿವೆ. ಪ್ರವರ್ಗ ‘2ಎ’ಗೆ ಈಗ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇಕಡ 15ರಷ್ಟು ಮೀಸಲಾತಿ ಇದೆ. ಈ ಪ್ರಮಾಣವು ಜನಸಂಖ್ಯೆಗೆ ಅನುಗುಣವಾಗಿ ನಿಗದಿಯಾದದ್ದಲ್ಲ. ‘2ಎ’ ಪಟ್ಟಿಯಲ್ಲಿರುವ 102 ಸಮುದಾಯಗಳಿಗೇ ಶೇ 15ರಷ್ಟು ಮೀಸಲಾತಿಯಿಂದ ನ್ಯಾಯ ದೊರಕುತ್ತಿಲ್ಲ.
ಓದಿ: ಬಳ್ಳಾರಿ ಜಿಲ್ಲೆ ನನಗೆ ರಾಜಕಾರಣದಲ್ಲಿ ಜನ್ಮ ನೀಡಿದೆ: ಸಚಿವ ಶ್ರೀರಾಮುಲು
ಆದ್ದರಿಂದ ತಾವುಗಳು ಯಾವುದೇ ಜಾತಿಗಳ ಸಾಮಾಜಿಕ, ಶೈಕ್ಷಣಿಕ ರಾಜಕೀಯ, ಆರ್ಥಿಕ ಹಾಗೂ ಅವರ ಹಿಂದುಳಿದಿರುವಿಕೆ ಬಗ್ಗೆ ಅಧ್ಯಯನವನ್ನು ನಡೆಸಿ, ಸಂವಿಧಾನದ 15, 16, ಹಾಗೂ 340ನೇ ವಿಧಿಗಳಿಗನುಸಾರ ಅರ್ಹರಾಗಿ ಇರುವವರಿಗೆ ಮೀಸಲಾತಿ ನೀಡಲೇಬೇಕು. ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಗೆ ಮಾತ್ರ ಮೀಸಲು ನೀಡಲು ಸಂವಿಧಾನದಲ್ಲಿ ಅವಕಾಶ ಇದೆ. ಆದ್ದರಿಂದ ಆಯೋಗವು ನಮ್ಮ ಈ ಸಮಸ್ಯೆಗಳನ್ನು ಆಲಿಸಿ, ಸಾಮಾಜಿಕ ನ್ಯಾಯ ಸೂತ್ರದಡಿ ಮತ್ತು ಅಸಮತೋಲನ ಉಂಟಾಗುವ ಅಪಾಯವನ್ನು ತಪ್ಪಿಸುವ ದೃಷ್ಟಿಯಿಂದ ಈ ಎಲ್ಲ ವರದಿಗಳನ್ನು ಪಡೆಯದೇ 2 ಎ ಮೀಸಲಾತಿ ಪಟ್ಟಿಗೆ ಸೇರಿಸಬಾರದು ಹಾಗೂ ಈ ಗೊಂದಲಗಳಿಗೆ ಅವಕಾಶ ನೀಡಬಾರದು ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮನವಿ ಮಾಡಿದೆ.