ಬೆಂಗಳೂರು: ರೈತರ ಟ್ರ್ಯಾಕ್ಟರ್ಗಳನ್ನು ಕದ್ದು ರೈತರಿಗೇ ಭೋಗ್ಯಕ್ಕೆ ಅಥವಾ ಬಾಡಿಗೆಗೆ ನೀಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದ ಚಾಣಕ್ಯ ಟ್ರ್ಯಾಕ್ಟರ್ ಕಳ್ಳನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಸೆರೆ ಹಿಡಿದಿದ್ದು, 12 ಟ್ರ್ಯಾಕ್ಟರ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಂಡ್ಯದ ಕೆಂಬಳ್ಳಿ ಮೂಲದ ಬೋರೇಗೌಡ ಬಂಧಿತ. ಹಳ್ಳಿಗಳಲ್ಲಿ ಟ್ರ್ಯಾಕ್ಟರ್ಗಳಿಗೆ ಬಲು ಬೇಡಿಕೆ. ಅದನ್ನೇ ಬಂಡವಾಳ ಮಾಡಿಕೊಂಡ ಈತ ಲಕ್ಷ, ಲಕ್ಷ ಕೊಟ್ಟು ಹೊಸ ಟ್ರ್ಯಾಕ್ಟರ್ ಖರೀದಿಸಲಾಗದವರಿಗೆ ಕದ್ದಿರುವ ಟ್ರ್ಯಾಕ್ಟರ್ಗಳನ್ನು ಕಡಿಮೆ ದರದಲ್ಲಿ ಲೀಸ್ ಅಥವಾ ಬಾಡಿಗೆಗೆ ನೀಡುತ್ತಿದ್ದ.
ಇತ್ತೀಚೆಗೆ ಸುಂಕದಕಟ್ಟೆಯಲ್ಲಿ ಟ್ರ್ಯಾಕ್ಟರ್ ಕಳ್ಳತನ ಆಗಿರುವ ಕುರಿತು ದೂರು ಬಂದ ಹಿನ್ನೆಲೆ ಪೊಲೀಸರು ನಡೆಸಿದ ತೀವ್ರ ಕಾರ್ಯಾಚರಣೆಯಲ್ಲಿ ಆರೋಪಿ ಸಿಕ್ಕಿ ಬಿದ್ದಿದ್ದ. ಈ ಹಿಂದೆ ನಡೆಸಿದ್ದ ಕೃತ್ಯಗಳ ಬಗ್ಗೆಯೂ ಇದೇ ವೇಳೆ ಬಾಯಿ ಬಿಟ್ಟಿದ್ದಾನೆ.
ತರಕಾರಿ ಮಾರಾಟ ಸೇರಿ ಇತರ ಕೆಲಸ ಕಾರ್ಯಕ್ಕೆ ಎಂದು ನಗರಕ್ಕೆ ಬರುವ ರೈತರು, ಕೆಲವೊಮ್ಮೆ ಇಲ್ಲಿಯೇ ಬಿಡಾರ ಹೂಡುತಿದ್ದರು. ಅಂತಹವರನ್ನು ಗುರಿಯಾಗಿಸಿಕೊಂಡು, ಆರೋಪಿ ರಾತ್ರಿ ಕಾರ್ಯಾಚರಣೆಗೆ ಇಳಿಯುತ್ತಿದ್ದ, ನಗರದಲ್ಲಿ ಟ್ರ್ಯಾಕ್ಟರ್ ಕದ್ದು ನೇರವಾಗಿ ಹೋಗುತ್ತಿದ್ದದ್ದು ಮಂಡ್ಯದ ಕೆಂಬಳ್ಳಿಗೆ.
ರೈತರಿಂದ ಕದ್ದ ಟ್ರ್ಯಾಕ್ಟರ್ಗಳನ್ನು ಮಾರಾಟ ಮಾಡಿದರೆ, ದಾಖಲೆ ಪತ್ರಗಳನ್ನು ಕೊಡಬೇಕಾಗುತ್ತದೆ. ಹೀಗಾಗಿ, ಅವುಗಳನ್ನು ಕಡಿಮೆ ಬಾಡಿಗೆಗೆ ಅಥವಾ ಭೋಗ್ಯಕ್ಕೆ ಕೊಡುತ್ತಿದ್ದ. ಇದರಿಂದ ಪೊಲೀಸರ ಕೈಗೆ ಸಿಕ್ಕಿಬೀಳುವ ಸನ್ನಿವೇಶ ಕಡಿಮೆ ಇತ್ತು. ಈ ಕೃತ್ಯವನ್ನು ಸುಮಾರು ವರ್ಷಗಳಿಂದ ಮಾಡುತ್ತಿದ್ದ ಎನ್ನಲಾಗಿದೆ. ಆದರೂ ಯಾವುದೇ ಅನುಮಾನ ಬಾರದಂತೆ ನಡೆದುಕೊಂಡಿದ್ದ.