ಬೆಂಗಳೂರು: ಬೇಸಿಗೆ ಹಿನ್ನೆಲೆಯಲ್ಲಿ ದಿನವೂ ವಿದ್ಯುತ್ ಬೇಡಿಕೆ ಹೆಚ್ಚುತ್ತಲೇ ಇದೆ. ರಾಜ್ಯದಲ್ಲಿ ಬೇಡಿಕೆ ನಿಭಾಯಿಸಲು ಜಲಾಶಯಗಳ ವಿದ್ಯುತ್ ಉತ್ಪಾದನಾ ಕೇಂದ್ರಗಳು, ಉಷ್ಣ ವಿದ್ಯುತ್ ಸ್ಥಾವರಗಳು ಮತ್ತು ಸೋಲಾರ್ ಯೋಜನೆಗಳ ಮೇಲೆ ಹೆಚ್ಚು ಒತ್ತಡ ಹೇರಲಾಗುತ್ತಿದೆ. ವಿದ್ಯುತ್ ಬಳಕೆ ಪ್ರಮಾಣ ಹೆಚ್ಚಳವಾಗಿರುವ ಕಾರಣ, ರಾಜ್ಯದ ದಿನದ ಬೇಡಿಕೆ 12 ಸಾವಿರ ಮೆಗಾ ವ್ಯಾಟ್ನಿಂದ 14 ಸಾವಿರ ಮೆಗಾ ವ್ಯಾಟ್ ಗಡಿ ದಾಟಿದೆ ಎಂದು ಕರ್ನಾಟಕ ವಿದ್ಯುತ್ ನಿಗಮ ಅಧಿಕಾರಿಗಳು ತಿಳಿಸಿದ್ದಾರೆ.
ಪರೀಕ್ಷಾ ಸಮಯವಾದ್ದರಿಂದ ವಿದ್ಯುತ್ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆಗಳನ್ನು ಸರ್ಕಾರ ನೀಡಿದೆ. ಮೇ ಅಂತ್ಯದ ತನಕ ಇದೇ ಸ್ಥಿತಿ ಮುಂದುವರೆಯಲಿದೆ. ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯ ಮನೆಯಲ್ಲೂ ವ್ಯತ್ಯಯವಾಗದಂತೆ ನೋಡಿಕೊಳ್ಳು ಸೂಚನೆ ನೀಡಲಾಗಿದೆ. ಉದಾಹರಣೆಗೆ ಶರಾವತಿ ಯೋಜನೆಯಲ್ಲಿ 1035 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯವಿದ್ದು, ಸದ್ಯ 750 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.
ಆರ್ಟಿಪಿಎಸ್ನಲ್ಲಿ 1720 ಮೆಗಾ ವ್ಯಾಟ್ ಸಾಮರ್ಥ್ಯವಿದ್ದು, 790 ಮೆ.ವ್ಯಾ, ಬಿಟಿಪಿಎಸ್ನಲ್ಲಿ 1700 ಮೆ.ವ್ಯಾ ಸಾಮರ್ಥ್ಯವಿದ್ದು, 872 ಮೆ.ವ್ಯಾ ಉತ್ಪಾದನೆ ಮಾಡಲಾಗುತ್ತಿದೆ. ಸೋಲಾರ್ ಯೋಜನೆಗಳಿಂದ ಹೆಚ್ಚಿನ ವಿದ್ಯುತ್ ಲಭ್ಯವಾಗುತ್ತಿರುವ ಕಾರಣ ಎಲ್ಲಿಯೂ ವಿದ್ಯುತ್ ಸಮಸ್ಯೆ ಸದ್ಯಕ್ಕೆ ಕಾಣಿಸಿಕೊಂಡಿಲ್ಲ. ಇರುವ ವಿದ್ಯುತ್ ಮೂಲಗಳಿಂದಲೇ ರಾಜ್ಯದಲ್ಲಿ ಬೇಡಿಕೆ ನಿಭಾಯಿಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮೈಸೂರು: ತಾಲೂಕಾಸ್ಪತ್ರೆಯಲ್ಲಿ ಕರೆಂಟ್ ಕಡಿತ.. ಕತ್ತಲಿನಲ್ಲೇ ದಿನ ದೂಡಿದ ರೋಗಿಗಳು