ಬೆಂಗಳೂರು: ಹೈಕೋರ್ಟ್ ಹಾಗೂ ಪೊಲೀಸ್ ಕಮೀಷನರ್ ಸೂಚನೆ ಹಿನ್ನೆಲೆ, ನಗರದ ಪ್ರಮುಖ ಸ್ಥಳಗಳಾದ ಮಲ್ಲೇಶ್ವರ, ಅಶೋಕ್ ನಗರ ಸೇರಿದಂತೆ ವ್ಯಾಪಾರಿ ಕೇಂದ್ರಗಳು, ಅಂಡರ್ ಪಾಸ್ ಹಾಗೂ ಪಾದಚಾರಿ ರಸ್ತೆಗಳಲ್ಲಿದ್ದ ವಾಹನಗಳನ್ನು ತೆರವು ಮಾಡಲಾಯಿತು.
ಓದಿ: Article 370 ಮರುಸ್ಥಾಪನೆಗೆ ಎಲ್ಲ ಪಕ್ಷಗಳ ಬೇಡಿಕೆ.. ಐತಿಹಾಸಿಕ ಸರ್ವಪಕ್ಷ ಸಭೆಯಲ್ಲಿ ಏನೆಲ್ಲ ನಡೀತು!
ನಗರದ ಸಂಚಾರಿ ಪೊಲೀಸರಿಂದ ತೆರವು ಕಾರ್ಯಾಚರಣೆ ನಡೆಯಿತು. ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ವಾಹನಗಳ ತೆರವಿಗೆ ಕರ್ನಾಟಕ ಹೈ ಕೋರ್ಟ್ ಹಾಗೂ ನಗರ ಪೊಲೀಸ್ ಆಯುಕ್ತರು ಖಡಕ್ ಸೂಚನೆ ನೀಡಿದ್ದರು.
ಹೈಕೋರ್ಟ್ ಸೂಚನೆ:
ಪಾದಚಾರಿ ಮಾರ್ಗಗಳ ಮೇಲೆ ವಾಹನ ನಿಲುಗಡೆ ಮಾಡಬಾರದೆಂದು ಸ್ಪಷ್ಟ ಆದೇಶ ನೀಡಿದ್ದರೂ ಸಹ, ಹಲವೆಡೆ ಪೊಲೀಸರೇ ವಾಹನಗಳನ್ನು ಪುಟ್ಪಾತ್ ಮೇಲೆ ನಿಲ್ಲಿಸುತ್ತಿರುವುದಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಪಾದಚಾರಿ ಮಾರ್ಗಗಳ ಮೇಲೆ ವಾಹನ ನಿಲುಗಡೆ ಮಾಡದಂತೆ ನಿರ್ದೇಶನ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯಪೀಠ ಪೊಲೀಸರ ವರ್ತನೆಗೆ ಆಕ್ಷೇಪಿಸಿತ್ತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಹಲವು ಪೊಲೀಸ್ ಠಾಣೆಗಳ ಮುಂದೆ ಹಾಗೂ ಅಕ್ಕಪಕ್ಕದಲ್ಲಿಯೇ ಪುಟ್ಪಾತ್ ಮೇಲೆ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿರುವ ಕುರಿತು ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಪೊಲೀಸರ ಈ ಕ್ರಮ ಸರಿಯೇ ಎಂದು ಪ್ರಶ್ನಿಸಿತು. ಅಲ್ಲದೆ, ನಿಯಮವನ್ನು ಪಾಲನೆ ಮಾಡಬೇಕಾದ ಪೊಲೀಸರೇ ಕಾನೂನು ಪಾಲನೆ ಮಾಡಲಿಲ್ಲ ಎಂದರೆ ಬೇರೆಯವರು ಹೇಗೆ ಪಾಲಿಸುತ್ತಾರೆ ಎಂದು ಸಿಜಿ ಪ್ರಶ್ನಿಸಿತ್ತು.
ಈ ಮಧ್ಯೆ ಸರ್ಕಾರಿ ವಕೀಲರು ನ್ಯಾಯಾಲಯದ ನಿರ್ದೇಶನದಂತೆ ಪಾದಚಾರಿ ಮಾರ್ಗಗಳ ಮೇಲೆ ವಾಹನ ನಿಲುಗಡೆ ಮಾಡುವುದನ್ನು ನಿಷೇಧಿಸಿ ಹೊರಡಿಸಿರುವ ಆದೇಶದ ಪ್ರತಿಯನ್ನು ಸಲ್ಲಿಸಿದ್ದರು. ಇದಕ್ಕೆ ಅರ್ಜಿದಾರರ ಪರ ವಕೀಲರು ಪ್ರತಿಕ್ರಿಯಿಸಿ, ನ್ಯಾಯಾಲಯ ಪಾದಚಾರಿ ಮಾರ್ಗಗಳ ಮೇಲೆ ವಾಹನ ನಿಲುಗಡೆ ಮಾಡಿದವರ ವಿರುದ್ಧ ಐಪಿಸಿ ಅಡಿ ಕ್ರಮ ಜರುಗಿಸುವಂತೆ ನಿರ್ದೇಶಿಸಿತ್ತು. ಆದರೆ ಆ ಅಂಶವನ್ನು ಸರ್ಕಾರದ ಆದೇಶದಲ್ಲಿ ಸೇರಿಸಿಲ್ಲ ಎಂದಿದ್ದರು.
ವರದಿಯನ್ನು ಪರಿಶೀಲಿಸಿದ ಪೀಠ, ಸರ್ಕಾರದ ಆದೇಶದಲ್ಲಿ ಕೆಲವೊಂದು ಲೋಪಗಳಿವೆ, ಅವುಗಳನ್ನು ತಿದ್ದುಪಡಿ ಮಾಡಿ ಹೊಸ ಆದೇಶದ ಪ್ರತಿಯನ್ನು ಸಲ್ಲಿಸಿ ಎಂದು ಸೂಚಿಸಿ ವಿಚಾರಣೆ ಮುಂದೂಡಿದ್ದರು.