ಬೆಂಗಳೂರು : ನಗರದ 12 ಅಧಿಕ ದಟ್ಟಣೆ ಇರುವ ರಸ್ತೆಗಳ ನಿರ್ವಹಣೆ ಮತ್ತು ಅಭಿವೃದ್ಧಿ ಹೊಣೆಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ ಸರ್ಕಾರ ಹಸ್ತಾಂತರಿಸಿದೆ. ಇದರ ಜೊತೆಗೆ ಅಭಿವೃದ್ಧಿ ಅನುಷ್ಠಾನಕ್ಕೆ ನೀಡಿರುವ ₹477.29 ಕೋಟಿ ಕೂಡ ಕೆಆರ್ಡಿಸಿಎಲ್ಗೆ ವರ್ಗಾವಣೆ ಆಗಲಿದೆ.
ಅನುಮೋದನೆ ನೀಡಿದ ಒಟ್ಟು ಮೊತ್ತದಲ್ಕಿ ₹300 ಕೋಟಿ ಅಭಿವೃದ್ಧಿಗೆ, ಉಳಿದ ಮೊತ್ತ ನಿರ್ವಹಣೆಗೆ ಮೀಸಲಿಡಬೇಕು. ಮುಂದಿನ ನಾಲ್ಕು ವರ್ಷ 2024-25ರವರೆಗೆ ಪ್ರತಿ ವರ್ಷ ನಿರ್ವಹಣೆಗಾಗಿ ₹100 ಕೋಟಿ ಸರ್ಕಾರ ಬಿಡುಗಡೆ ಮಾಡಲಿದೆ. ಯೋಜನೆ ವೆಚ್ಚ ನಿಗದಿಪಡಿಸಿದ ಮೊತ್ತ ಮೀರಿದ್ರೆ ಹೆಚ್ಚುವರಿ ಹಣವನ್ನು ಬಿಬಿಎಂಪಿ ಭರಿಸಲಿದೆ ಎಂಬ ಷರತ್ತು ಕೂಡ ವಿಧಿಸಲಾಗಿದೆ.
ನಗರದ ರಸ್ತೆಗಳ ಅಭಿವೃದ್ಧಿ ಹೊಣೆ ಬಿಬಿಎಂಪಿಯದ್ದು ಎಂದು ಸಚಿವ ಸಂಪುಟದಲ್ಲೇ ತೀರ್ಮಾನ ಆಗಿದ್ದರೂ ಈಗ 200 ಕಿ.ಮೀ ಉದ್ದದ ರಸ್ತೆಗಳ ನಿರ್ವಹಣೆ ಜವಾಬ್ದಾರಿಯನ್ನು ಕೆಆರ್ಡಿಸಿಎಲ್ಗೆ ವರ್ಗಾವಣೆ ಮಾಡಿರುವುದಕ್ಕೆ ವಿರೋಧವೂ ಕೇಳಿ ಬಂದಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 13 ಸಾವಿರ ಕಿ.ಮೀ ಉದ್ದದ ರಸ್ತೆ ಜಾಲವಿದ್ದು ಇದರಲ್ಲಿ, 191 ಕಿ.ಮೀ ನಷ್ಟು 12 ಅಧಿಕ ದಟ್ಟಣೆ ಇರುವ ಕಾರಿಡಾರ್ ಹಾಗೂ 474 ಕಿ.ಮೀ ಉದ್ದದ ಪ್ರಮುಖ ಮತ್ತು ಉಪ ಪ್ರಮುಖ ರಸ್ತೆಗಳಿವೆ.
ಹೀಗಾಗಿ ಬಿಬಿಎಂಪಿಗೆ ಪ್ರತ್ಯೇಕ ಅನುದಾನದಡಿ ಕಾರ್ಯನಿರ್ವಹಿಸುವ ವ್ಯವಸ್ಥೆ ಇಲ್ಲದಿರುವುದರಿಂದ ಅಭಿವೃದ್ಧಿಗೆ ಹಿನ್ನಡೆ ಉಂಟಾಗಿದೆ ಎಂಬ ಅಭಿಪ್ರಾಯದ ಮೇಲೆ ಈ ಯೋಜನೆಯನ್ನು ಕೆಆರ್ಡಿಸಿಎಲ್ಗೆ ಹಸ್ತಾಂತರಿಸಲಾಗಿದೆ.
12 ಕಾರಿಡಾರ್ಗಳು ಕಾರಿಡಾರ್ ಕಿ.ಮೀನಲ್ಲಿ
ಬಳ್ಳಾರಿ ರಸ್ತೆ 7.45
ಹಳೆಯ ಮದ್ರಾಸ್ ರಸ್ತೆ 18.50
ಹಳೆಯ ವಿಮಾನ ನಿಲ್ದಾಣ ರಸ್ತೆ 17.15
ಸರ್ಜಾಪುರ ರಸ್ತೆ 8.75
ಹೊಸೂರು ರಸ್ತೆ 6.45
ಬನ್ನೇರುಘಟ್ಟ ರಸ್ತೆ 16.50
ಕನಕಪುರ ರಸ್ತೆ 14.50
ಮೈಸೂರು ರಸ್ತೆ 15.40
ಮಾಗಡಿ ರಸ್ತೆ 12
ತುಮಕೂರು ರಸ್ತೆ 7.9
ವೆಸ್ಟ್ ಆಫ್ ಕಾರ್ಡ್ ರೋಡ್ 8.4
ಹೊರವರ್ತುಲ ರಸ್ತೆ 58
ಒಟ್ಟಾರೆ - 191 ಕಿ.ಮೀ ರಸ್ತೆ ನಿರ್ಮಾಣದ ಗುರಿ ಹೊಂದಿದೆ. ಸ್ಥಳೀಯ ಸಂಸ್ಥೆ ಬಿಬಿಎಂಪಿ ಹಾಗೂ ಸರ್ಕಾರದಡಿ ಬರುವ ಕೆಆರ್ಡಿಸಿಎಲ್ ನಡುವೆ ರಸ್ತೆಗಳ ಅಭಿವೃದ್ಧಿಗೆ ಪೈಪೋಟಿ ನಡೆದು ಕಡೆಗೂ ಕೆಆರ್ಡಿಸಿಎಲ್ ಪಾಲಾಗಿದೆ. ಆದ್ರೆ, ಇದಕ್ಕೆ ಸ್ಥಳೀಯ ಮಟ್ಟದಲ್ಲಿ ವಿರೋಧಗಳೂ ಉಂಟಾಗ್ತಿವೆ.