ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ಬಿಜೆಪಿ ಘಟಕದಿಂದ ಜೆಡಿಎಸ್ ಶಾಸಕ ಗೋಪಾಲಯ್ಯ ಸೇರ್ಪಡೆ ವಿರೋಧಿಸಿ, ಬಿಜೆಪಿ ರಾಜ್ಯ ಉಸ್ತುವಾರಿ ಮುರುಳೀಧರರಾವ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಸೇರಿ ರಾಜ್ಯ ಮಟ್ಟದ ನಾಯಕರಿಗೆ ಪತ್ರ ಬರೆದಿದ್ದಾರೆ.
ಗೋಪಾಲಯ್ಯ ಬಿಜೆಪಿ ಸೇರ್ಪಡೆಗೆ ನಮ್ಮ ವಿರೋಧ ಇದೆ. 1996 ರಲ್ಲಿ ಬಿಜೆಪಿ ಕಾರ್ಯಕರ್ತರನ್ನು ಕೊಲೆ ಮಾಡಿಸಿದ ಆರೋಪ ಹೊತ್ತಿದ್ದು, ಅವರು ಅಪರಾಧ ಹಿನ್ನಲೆ ಉಳ್ಳವರಾಗಿದ್ದಾರೆ. ಈಗ ಮಂತ್ರಿ ಆಸೆಗಾಗಿ ಬಿಜೆಪಿಗೆ ಬರ್ತಾ ಇದ್ದಾರೆ. ಅವರಿಂದ ಪಕ್ಷಕ್ಕೆ ಲಾಭ ಇಲ್ಲ. ಇಂಥವರನ್ನು ಸೇರಿಸಿಕೊಂಡರೆ ಪಕ್ಷದ ತತ್ತ್ವ ಸಿದ್ಧಾಂತಕ್ಕೆ ಬೆಲೆ ಇಲ್ಲದಂತಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಮಹಾಲಕ್ಷ್ಮಿ ಲೇಔಟ್ ಜನರು 94 ಸಾವಿರ ಮತಗಳ ಮುನ್ನಡೆ ನೀಡಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಕಾರಣರಾಗಿದ್ದಾರೆ. ಆ ಮುನ್ನಡೆ ಶಾಸಕ ಗೋಪಾಲಯ್ಯ ಹಾಗೂ ಮೈತ್ರಿ ಅಭ್ಯರ್ಥಿ ವಿರುದ್ಧ ಬಂದ ಮತಗಳೇ ಆಗಿವೆ.
ಈಗ ಗೋಪಾಲಯ್ಯ ಅವರನ್ನು ಪಕ್ಷಕ್ಕೆ ಕರೆತಂದರೆ ಮತದಾರರ ನಿರ್ಣಯದ ವಿರುದ್ಧ ಪಕ್ಷ ನಡೆದುಕೊಂಡಂತಾಗಲಿದೆ .ಹಾಗಾಗಿ ಅವರು ಬಿಜೆಪಿಗೆ ಪಕ್ಷ ಸೇರ್ಪಡೆ ಆಗೋದು ಬೇಡ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ಕೇವಲ ಸಂಖ್ಯಾಬಲದ ಆಧಾರಕ್ಕೆ ಈ ರೀತಿ ಪಕ್ಷದ ವಿರುದ್ಧ ಇದ್ದವರನ್ನು ಪಕ್ಷಕ್ಕೆ ಕರೆತಂದರೆ ,ಪಕ್ಷದ ಹಿತವನ್ನು ಬಲಿಕೊಟ್ಟಂತಾಗಲಿದೆ. ಹೀಗಾಗಿ ಅವರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗೋದು ಬೇಡ ಎಂದು ಒತ್ತಾಯಿಸಿದ್ದಾರೆ.