ಬೆಂಗಳೂರು : ಈಗಾಗಲೇ ಮೊದಲ ಹಂತದಲ್ಲಿ ಕೋವಿಡ್ ವ್ಯಾಕ್ಸಿನೇಷನ್ನ ಪೌರ ಕಾರ್ಮಿಕರಿಗೆ ನೀಡಲಾಗಿದೆ. ಇಂದಿನಿಂದ ಎರಡನೇ ಲಸಿಕಾ ಅಭಿಯಾನ ನಡೆಯುತ್ತಿದೆ. ಆದರೆ, ವ್ಯಾಕ್ಸಿನ್ ಹಾಕಿಸಿಕೊಳ್ಳಲು ಕೆಲ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದು, 8,02,101 ಗುರಿ ಹೊಂದಿರುವ ಇಲಾಖೆಯಲ್ಲಿ ಈವರೆಗೆ 3,81,555 ಲಸಿಕೆ ಪಡೆದುಕೊಂಡಿದ್ದಾರೆ.
ಲಸಿಕೆ ಪಡೆಯಲು ವಾರಿಯರ್ಸ್ ಹಿಂಜರಿಯುತ್ತಿದ್ದಾರಾ ಎಂಬ ಪ್ರಶ್ನೆಗೆ ಡಿಸಿಎಂ ಅಶ್ವತ್ಥ್ ನಾರಾಯಣ ಪ್ರತಿಕ್ರಿಯಿಸಿದ್ದು, ನಾವು ಕೋವಿಡ್ ಲಸಿಕೆಯನ್ನ ಯಾರಿಗೂ ಮ್ಯಾಂಡೇಟರಿ ಮಾಡಿಲ್ಲ. ವಾಲೆಂಟರಿಯಾಗಿ ಬಂದು ಪಡೆಯಬಹುದು. ಸೋಂಕಿತರಾಗಿದ್ದವರು ಲಸಿಕೆ ವಿಚಾರದಲ್ಲಿ ಗೊಂದಲಕ್ಕೊಳಗಾಗಿದ್ದಾರೆ. ಹೀಗಾಗಿ, ಅಂತಹವರು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬಂದಿಲ್ಲ ಎಂದರು.
ಅಲ್ಲದೆ, ಲಸಿಕೆಯ ಕುರಿತು ನಂಬಿಕೆ, ವಿಶ್ವಾಸ ಶೇ.100ಕ್ಕೆ 100ರಷ್ಟಿದೆ. ಇತರೆ ವ್ಯಾಕ್ಸಿನ್ಗಿಂತ ನಮ್ಮಲ್ಲಿ ಸಿದ್ದವಾಗಿರುವ ವ್ಯಾಕ್ಸಿನ್ ಗುಣಮಟ್ಟದ್ದಾಗಿದೆ. ಈಗಾಗಲೇ ಫ್ರಂಟ್ಲೈನ್ ವಾರಿಯರ್ಸ್ಗೆ ವ್ಯಾಕ್ಸಿನೇಷನ್ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ 50 ವರ್ಷ ದಾಟಿದವರಿಗೂ ಲಸಿಕೆ ನೀಡುವ ಕೆಲಸ ಮಾಡುತ್ತೇವೆ ಎಂದರು.
ಇನ್ನು, ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಪ್ರತಿಕ್ರಿಯಿಸಿದ್ದು, ಲಸಿಕಾ ಅಭಿಯಾನ ಒಂದು ವಾರಗಳ ಕಾಲ ನಡೆದಿದೆ. ಮಧ್ಯದಲ್ಲಿ ಪೋಲಿಯೋ ಲಸಿಕಾ ಅಭಿಯಾನ ನಡೆಯಿತು. ಹೀಗಾಗಿ, ಫ್ರಂಟ್ಲೈನ್ ವಾರಿಯರ್ಸ್ ಅದರಲ್ಲಿ ಬ್ಯುಸಿಯಾದರು.
ಈಗ ಎರಡನೇ ಹಂತದಲ್ಲಿ ಅನೇಕ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಲಸಿಕೆಯನ್ನ ಇಂದಿನಿಂದ ನೀಡುತ್ತಿದ್ದೇವೆ. ಜೊತೆ ಜೊತೆಗೆ ಫ್ರಂಟ್ ಲೈನ್ ವಾರಿಯರ್ಸ್ ಕೂಡ ಲಸಿಕೆ ತೆಗೆದುಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಲ್ಲರಿಗೂ ಸಹಕಾರ ನೀಡುವಂತೆ ಕೇಳಿದ್ದೇವೆ. ಆಯಾ ಆಸ್ಪತ್ರೆಯ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿದ್ದು, ಮುಂದಿನ ವಾರದೊಳಗೆ ಶೇ.80ರಷ್ಟು ವ್ಯಾಕ್ಸಿನೇಷನ್ ಕವರೇಜ್ ಆಗುತ್ತೆ.
ಬೇರೆ ರಾಜ್ಯದಲ್ಲಿ ಲಸಿಕೆ ಪಡೆಯದೇ ಇರುವ ವಾರಿಯರ್ಸ್ಗಳ ವೇತನ ಕಡಿತ ವಿಚಾರ ನನ್ನ ಗಮನಕ್ಕೂ ಬಂದಿದೆ. ಲಸಿಕೆಯನ್ನ ಒತ್ತಾಯ ಪೂರ್ವಕವಾಗಿ ಹಾಕಿಸಿಕೊಳ್ಳುವಂತೆ ಮಾಡಿಲ್ಲ, ಬದಲಿಗೆ ಸ್ವಯಂ ಆಗಮಿಸಿ ಪಡೆಯುವಂತೆ ಮಾರ್ಗದರ್ಶನ ನೀಡಲಾಗಿದೆ ಎಂದರು.