ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ಪ್ರತಿದಿನ ಬೆಳಗಿನ ಅವಧಿಯಲ್ಲಿ ಸಂವಿಧಾನದ ಪೀಠಿಕೆಯನ್ನು ವಿದ್ಯಾರ್ಥಿಗಳಿಂದ ಓದಿಸಬೇಕು ಎಂದು ಶಾಸಕ ಎನ್.ಮಹೇಶ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ವಿಧಾನಸಭೆಯಲ್ಲಿ ಇಂದು ಸಂವಿಧಾನ ಕುರಿತ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೊಳ್ಳೇಗಾಲದ ತಮ್ಮ ಕ್ಷೇತ್ರದಲ್ಲಿ ಈ ರೀತಿ ಸಂವಿಧಾನದ ಪೀಠಿಕೆ ಬೋಧಿಸುವ ಕೆಲಸವಾಗುತ್ತಿದೆ. ರಾಜ್ಯಾದ್ಯಂತ ಎಲ್ಲಾ ಕ್ಷೇತ್ರಗಳಲ್ಲೂ ಇದು ಜಾರಿಗೆ ತರಬೇಕು ಎಂದರು. ಅಂಬೇಡ್ಕರ್ ಅವರು ಸಂವಿಧಾನಬದ್ಧವಾಗಿ ಪರಿಶಿಷ್ಟರಿಗೆ ರಾಜಕೀಯ ಮೀಸಲಾತಿಯನ್ನು ತಂದುಕೊಟ್ಟಿದ್ದಾರೆ. ಆದರೆ ಸ್ವತಂತ್ರವಾಗಿ ಗೆದ್ದು ಬರುವ ಸಾಮರ್ಥ್ಯ ಈಗಲೂ ಇಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ರಾಜಕೀಯ ಮೀಸಲಾತಿಯಿಂದಾಗಿ ರಾಜ್ಯದಿಂದ ವಿಧಾನಸಭೆಗೆ 51 ಶಾಸಕರು, ಲೋಕಸಭೆಗೆ ಐದು ಮಂದಿ ಸಂಸದರು ಆಯ್ಕೆಯಾಗುತ್ತಿದ್ದಾರೆ.
ಪ್ರಬುದ್ಧ ಭಾರತ ನಿರ್ಮಾಣವಾಗಬೇಕೆಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಸರ್ವರಿಗೂ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಇನ್ನೂ ಸಿಕ್ಕಿಲ್ಲ. ದೇಶದ ಎಲ್ಲಾ ಜನರಲ್ಲಿ ಭ್ರಾತೃತ್ವದ ಭಾವನೆ ಮೂಡಿದಾಗ ಐಕ್ಯತೆ, ಸಮಗ್ರತೆ ಉಳಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.