ಬೆಂಗಳೂರು: ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಹಿನ್ನೆಲೆ ಬಂಡಾಯ ಅಭ್ಯರ್ಥಿಗಳ ನಾಮಪತ್ರ ವಾಪಾಸು ಪಡಿಸಲು ಸಿಎಂ ಬಿಎಸ್ವೈ ಸರ್ಕಸ್ ಮಾಡುತ್ತಿದ್ದು, ಮನೆಯಲ್ಲಿಯೇ ಕುಳಿತು ದೂರವಾಣಿ ಮೂಲಕ ಉಸ್ತುವಾರಿಗಳ ಜೊತೆ ನಿರಂತರ ಸಮಾಲೋಚನೆಯಲ್ಲಿ ತೊಡಗಿದ್ದಾರೆ ಎಂದು ಹೇಳಲಾಗಿದೆ.
ಬಿಜೆಪಿ ಅಭ್ಯರ್ಥಿಗಳ ವಿರುದ್ಧ ನಿಂತಿರುವ ಬಂಡಾಯ ಅಭ್ಯರ್ಥಿಗಳಿಂದ ನಾಮಪತ್ರ ವಾಪಾಸು ಪಡಿಸಲು ಸಿಎಂ ಕಸರತ್ತು ಮುಂದುವರೆಸಿದ್ದಾರೆ. ದೂರವಾಣಿ ಮೂಲಕ ಉಸ್ತುವಾರಿಗಳೊಂದಿಗೆ ಮಾತುಕತೆ ನಡೆಸಿ ಬಂಡಾಯ ಅಭ್ಯರ್ಥಿಗಳಿಂದ ನಾಮಪತ್ರ ಹಿಂಪಡಿಸುವಂತೆ ಮನವೊಲಿಸಿ, ಯಾವುದೇ ಕಾರಣಕ್ಕೂ ಅವರು ಚುನಾವಣೆಗೆ ಸ್ಪರ್ಧೆ ಮಾಡಬಾರದು, ಅವರ ಮನವೊಲಿಸುವಂತೆ ಸಿಎಂ ಸೂಚನೆ ನೀಡುತ್ತಿದ್ದಾರೆ.
ಗೋಕಾಕ್ನಲ್ಲಿ ಜೆಡಿಎಸ್ನ ಅಶೋಕ್ ಪೂಜಾರಿ ಮನವೊಲಿಕೆ ಹಾಗೂ ಅಥಣಿಯಲ್ಲಿ ಜೆಡಿಎಸ್ ಅಭ್ಯರ್ಥಿ ನಾಮಪತ್ರ ಹಿಂಪಡೆಸುವ ಬಗ್ಗೆ ಸವದಿಗೆ ಸಿಎಂ ಸೂಚಿಸಿದ್ದಾರೆ. ಹೊಸಪೇಟೆಯಲ್ಲಿ ಬಂಡಾಯ ಅಭ್ಯರ್ಥಿ ಕವಿರಾಜ್ ಅರಸ್ ಮನವೊಲಿಕೆ, ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಮನವೊಲಿಸಲು ಚುನಾವಣಾ ಉಸ್ತುವಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.