ಬೆಂಗಳೂರು : ರಾಜ್ಯಮಟ್ಟದಲ್ಲಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಯೋಜನೆಗಳನ್ನು ಸುಗಮವಾಗಿ ಮುಂದುವರೆಸಲು ಸರ್ಕಾರ ಮತ್ತು ದಾನಿಗಳ ನಡುವೆ ಒಂದು ಪಾರದರ್ಶಕ ಸೇತುವೆಯಾಗಿ ಆಕಾಂಕ್ಷಾ ಪೋರ್ಟಲ್ ಕಾರ್ಯನಿರ್ವಹಿಸಲಿದೆ.
ಇದರಿಂದ ಸಿಎಸ್ಆರ್ ಅನುದಾನವನ್ನು ನಿಜಕ್ಕೂ ಅಗತ್ಯವಿರುವ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಸ್ಆರ್ ಸೌಲಭ್ಯದ ಸಮಗ್ರ ಆನ್ಲೈನ್ ವೇದಿಕೆ ‘ಆಕಾಂಕ್ಷಾ’ ಪೋರ್ಟಲ್ಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಕೋವಿಡ್ ನಿಯಂತ್ರಣ ಪ್ರಕ್ರಿಯೆಯಲ್ಲಿ ಕಾರ್ಪೊರೇಟ್ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರವನ್ನು ಶ್ಲಾಘಿಸಿದರು. ಈಗಾಗಲೇ ಆರೋಗ್ಯ ವಲಯಕ್ಕೆ 175 ಕೋಟಿ ಸಿಎಸ್ಆರ್ ನಿಧಿಯನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುಎನ್ಡಿಪಿಯು ಈ ಪೋರ್ಟಲ್ ಸೃಜನೆಯಲ್ಲಿ ನೆರವು ನೀಡಿದ್ದು, ಈ ಪೋರ್ಟಲ್ನಲ್ಲಿ ಸುಲಭವಾಗಿ ಹಾಗೂ ಪಾರದರ್ಶಕವಾಗಿ ಸಿಎಸ್ಆರ್ ಅನುದಾನ ಬಳಕೆಗೆ ಅನುವು ಮಾಡಿ ಕೊಡಲಾಗಿದೆ ಎಂದು ವಿವರಿಸಿದರು. ದೇಶದಲ್ಲಿ ಪ್ರಥಮ ಬಾರಿಗೆ ಇಂತಹ ಪೋರ್ಟಲನ್ನು ಸಿದ್ಧಪಡಿಸಲಾಗಿದ್ದು, ಕೋವಿಡ್ ನಿರ್ವಹಣೆ ಹಾಗೂ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗೆ ಇದು ಪೂರಕವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಶುರುವಾಯ್ತು ಮೈಕ್ರೋ ಕಂಟೈನ್ಮೆಂಟ್ ಝೋನ್ ಪ್ರಕ್ರಿಯೆ
ವಿಶ್ವಸಂಸ್ಥೆಯು ನಿಗದಿ ಪಡಿಸಿದ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗಾಗಿ ವಿಷನ್ 2030 ತಯಾರಿಸಲಾಗಿದೆ. ಇದಕ್ಕಾಗಿ ಬೇಡಿಕೆ ಇರುವ 75 ಸಾವಿರ ಕೋಟಿ ರೂ. ಅನುದಾನದ ಪೈಕಿ 61,000 ಕೋಟಿ ರೂ. ಗಳನ್ನು ಆಯವ್ಯಯದಲ್ಲಿ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕಳೆದ ಸಾಲಿನಲ್ಲಿ ಆರೋಗ್ಯ ವಲಯದ ಚಟುವಟಿಕೆಗಳಿಗೆ 11,527 ಕೋಟಿ ರೂ. ವೆಚ್ಚ ಮಾಡಿದ್ದು, ಪ್ರಸಕ್ತ ಸಾಲಿಗೆ 11,650 ಕೋಟಿ ರೂ. ಒದಗಿಸಲಾಗಿದೆ. ಕೋವಿಡ್ 19ರ ಎರಡನೇ ಅಲೆ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ನಿರ್ಬಂಧದಿಂದ ಬಾಧಿತರಾದವರಿಗೆ 1250 ಕೋಟಿಗೂ ಹೆಚ್ಚು ಮೊತ್ತದ ಪ್ಯಾಕೇಜ್ ಘೋಷಿಸಲಾಗಿದೆ.
ಅಲ್ಲದೆ, 2.06 ಲಕ್ಷ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲಾಗಿದ್ದು, 956 ಕೋಟಿ ರೂ. ವೆಚ್ಚ ಭರಿಸಲಾಗುತ್ತಿದೆ. ಕೊರೊನಾ ಸಂಕಷ್ಟಕ್ಕೆ ನೆರವಾಗಲು ಬಯಸುವವರು ಹಾಗೂ ಇತರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನೆರವು ನೀಡಲು ಬಯಸುವ ದಾನಿಗಳು ಆಕಾಂಕ್ಷಾ ಪೋರ್ಟಲ್ ಮೂಲಕ ನೆರವು ನೀಡಬಹುದಾಗಿದೆ ಎಂದು ತಿಳಿಸಿದರು.
ತಾಲೂಕು/ಜಿಲ್ಲಾಮಟ್ಟದ ಆಸ್ಪತ್ರೆಗಳ ಅಭಿವೃದ್ಧಿ, ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಆನ್ಲೈನ್ ಶಿಕ್ಷಣ, ಕೇಂದ್ರ ಸರ್ಕಾರದ ಗುರುತಿಸಿರುವ 2 ಮಹತ್ವಾಕಾಂಕ್ಷೆ ಜಿಲ್ಲೆಗಳಾದ ರಾಯಚೂರು ಮತ್ತು ಯಾದಗಿರಿ ಹಾಗೂ 114 ಹಿಂದುಳಿದ ತಾಲೂಕುಗಳಿಗೆ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಇನ್ನಿತರ ಜನೋಪಯೋಗಿ ಕಾರ್ಯಗಳಿಗೆ ಬೇಕಾದ ಅಗತ್ಯತೆಗಳನ್ನು ಈಗಾಗಲೇ ವಿವಿಧ ಇಲಾಖೆಯವರು ಆಕಾಂಕ್ಷ ಪೋರ್ಟಲ್ನಲ್ಲಿ ಅಳವಡಿಸಿರುತ್ತಾರೆ.
ಆದ್ದರಿಂದ ಈ ಪೋರ್ಟಲ್ ಮೂಲಕ ದಾನಿಗಳು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಹಾಗೂ ದರ್ಪಣ್ ಪೋರ್ಟಲ್ನಲ್ಲಿ ನೋಂದಾಯಿಸಿದ ಸ್ವಯಂ ಸೇವಾ ಸಂಸ್ಥೆಗಳಿಗೆ ಆನ್ಲೈನ್ ಸಂಪರ್ಕವನ್ನು ಸಾಧಿಸಿ, ತ್ವರಿತವಾಗಿ, ನಾಡಿನ ಜನರಿಗೆ ಈ ಸಂಕಷ್ಟದಲ್ಲಿ ಸಹಕಾರ ನೀಡಬಹುದಾಗಿದೆ ಎಂದು ಸಮಗ್ರ ವಿವರ ನೀಡಿದರು.
ಇದನ್ನೂ ಓದಿ: ಮನೆ ಬಾಗಿಲಿಗೆ ಬರ್ತಿದೆ ಲಸಿಕೆ: ಖಾಸಗಿ ಆಸ್ಪತ್ರೆಯಿಂದ ಸೈಟ್ ವ್ಯಾಕ್ಸಿನೇಷನ್ ಶಿಬಿರ ಶುರು
ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ನೀತಿ ಆಯೋಗದ ಸಿಇಓ ಅಮಿತಾಬ್ ಕಾಂತ್, ಕರ್ನಾಟಕ ವಿವಿಧ ವಲಯಗಳಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ಕರ್ನಾಟಕವು ಪ್ರಾರಂಭಿಸಿರುವ ಆಕಾಂಕ್ಷಾ ಪೋರ್ಟಲ್, ಸಿಎಸ್ಆರ್ ನಿಧಿ ಅಗತ್ಯವಿರುವ ಜಿಲ್ಲೆಗಳ ಅಭಿವೃದ್ಧಿಗೆ ಬಳಕೆಯಾಗಲು ನೆರವಾಗಲಿದೆ. ಆ ಮೂಲಕ ರಾಜ್ಯದ ಎಲ್ಲ ಭಾಗಗಳ ಸಮಾನ ಅಭಿವೃದ್ಧಿಗೆ ಸಾಧನವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಪೋರ್ಟಲ್ ಸ್ಥಾಪನೆಗೆ ನೆರವು ನೀಡಿದ ವಿಶ್ವ ಸಂಸ್ಥೆಯ ಅಂಗಸಂಸ್ಥೆ ಯುಎನ್ಡಿಪಿಯ ಪ್ರತಿನಿಧಿ ಶೊಕೊ ನೊಡಾ ಅವರು ಮಾತನಾಡಿ, ಕೋವಿಡ್ ಸಾಂಕ್ರಾಮಿಕದ ಸಂಕಷ್ಟದ ಕಾಲದಲ್ಲಿ ಸರ್ಕಾರ, ಕಾರ್ಪೊರೇಟ್ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ನಾಗರಿಕರು ಜೊತೆಯಾಗಿ ಸಂಕಷ್ಟವನ್ನು ಎದುರಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಆಕಾಂಕ್ಷಾ ಪೋರ್ಟಲ್ ಇತರರಿಗೆ ಮಾದರಿಯಾಗಲಿದೆ ಎಂದು ಆಶಿಸಿದರು.
ಯುವಜನಸೇವೆ ಮತ್ತು ಕ್ರೀಡೆ ಹಾಗೂ ಯೋಜನಾ ಸಚಿವ ನಾರಾಯಣಗೌಡ ಉಪಸ್ಥಿತರಿದ್ದರು. ಯೋಜನಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಹಾಗೂ ಸಿಎಸ್ಆರ್ ನೆರವಿನ ನೋಡಲ್ ಅಧಿಕಾರಿ ಉಮಾ ಮಹಾದೇವನ್ ಮೊದಲಾದವರು ಭಾಗವಹಿಸಿದ್ದರು.
ಇದನ್ನೂ ಓದಿ: ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ವ್ಯಕ್ತಿ ಹೆಸರು ಪರಿಹಾರ ಪಟ್ಟಿಯಲ್ಲಿ ನಾಪತ್ತೆ!