ಬೆಂಗಳೂರು: ಪ್ರಾಥಮಿಕ ಶಿಕ್ಷಣ ಇಲಾಖೆಯ ಶಾಲೆಗಳಲ್ಲಿ ಆರು ಸಾವಿರದ ಐದನೂರಕ್ಕೂ ಹೆಚ್ಚು ಕೊಠಡಿಗಳ ನಿರ್ಮಾಣ ಕಾರ್ಯವನ್ನು ಅಂದಾಜು 1 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳಾಗಿ ಪರಿವರ್ತಿಸಲು, ಸ್ಪೋಕನ್ ಇಂಗ್ಲೀಷ್ ಕಲಿಸಲು ಸಿಎಸ್ಆರ್ ಸಹಯೋಗ ಪಡೆಯಲು ನಿರ್ದೇಶನ ನೀಡಿದರು.
2022-23ನೇ ಸಾಲಿನ ಬಜೆಟ್ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಗೃಹ ಕಚೇರಿ ಕೃಷ್ಣಾದಲ್ಲಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಪ್ರಾಥಮಿಕ ಶಿಕ್ಷಣ ಇಲಾಖೆ ಸಭೆಯಲ್ಲಿ ಮಾತನಾಡಿದ ಸಿಎಂ, ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳ ಸಂಖೆ ಕಡಿಮೆ ಇದೆ. ಅಚ್ಚುಕಟ್ಟಿನ ಮತ್ತು ವ್ಯವಸ್ಥಿತ ಕೊಠಡಿಗಳ ಸಂಖ್ಯೆ ಕಡಿಮೆ ಇದೆ. ಹೀಗಾಗಿ, ಸರ್ಕಾರಿ ಶಾಲೆಗಳಲ್ಲಿ ಪೂರ್ಣಪ್ರಮಾಣದ ಮತ್ತು ಸುಸಜ್ಜಿತ ಕೊಠಡಿಗಳ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ ಎಂದರು.
ಬಜೆಟ್ನ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಆರ್ಥಿಕ ಹಾಗೂ ಸಮಯ ನಿರ್ವಹಣೆ ಬಹಳ ಮುಖ್ಯ. ಎಲ್ಲ ಕಾರ್ಯಕ್ರಮಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕು. ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಮೂಲ ಸೌಕರ್ಯ ಅಭಿವೃದ್ಧಿಗೆ 500 ಕೋಟಿ ರೂ. ಒದಗಿಸಲಾಗುವುದು.
ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನಂತರ ಎಸ್ಜಿಪಿಗೆ 2ನೇ ಆದ್ಯತೆ ಹಾಗೂ ಎಸ್ಜಿಪಿಗಳಿಗೆ 3ನೇ ಆದ್ಯತೆ ನೀಡಬೇಕು. ಕೆಕೆಆರ್ ಡಿ ಬಿ ವ್ಯಾಪ್ತಿಯಲ್ಲಿ 32 ಆಕಾಂಕ್ಷಿ ತಾಲೂಕುಗಳಿದ್ದು, ಅವುಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು.
ಕ್ಷೇತ್ರವಾರು ಅಭಿವೃದ್ಧಿಗೊಳಿಸುವ ಶಾಲೆಗಳ ಸಂಖ್ಯೆಯನ್ನು ನಿಗದಿಪಡಿಸಬೇಕು, ಈ ಯೋಜನೆಯಡಿ ನಿರ್ಮಾಣವಾಗುವ ಶಾಲಾ ಕಟ್ಟಡಗಳು ಏಕರೂಪದ ಮಾದರಿ ಹಾಗೂ ಬಣ್ಣವನ್ನು ಹೊಂದಿರುವುದು ಹಾಗೂ ಈ ಕಟ್ಟಡಗಳಿಗೆ ಹೆಸರನ್ನು ನಮೂದಿಸಬೇಕು ಎಂದರು.
ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳಾಗಿ ಉನ್ನತೀಕರಿಸುವುದಕ್ಕೆ ಸಂಬಂಧಿಸಿದಂತೆ ಸಿಎಸ್ಆರ್ ತೊಡಗಿರುವ ಕಂಪನಿಗಳೊಂದಿಗೆ ಸಭೆ ನಿಗದಿಪಡಿಸಬೇಕು. ಶಾಲೆಗಳಲ್ಲಿ ಸ್ಪೋಕನ್ ಇಂಗ್ಲೀಷ್ ಕಲಿಸಿಲು ಶಿಕ್ಷಕರ ಸೇವೆಯನ್ನು ಸಿಎಸ್ ಆರ್ ಸಹಯೋಗದಲ್ಲಿ ಪಡೆಯಬೇಕು. ಅಂತೆಯೇ ಅರೆಕಾಲಿಕ ಶಿಕ್ಷಕರು, ಲ್ಯಾಬ್ ಸಿಬ್ಬಂದಿ ಹಾಗೂ ಸಾರಿಗೆ ವ್ಯವಸ್ಥೆಯನ್ನು ಸಿಎಸ್ ಆರ್ ಸಹಯೋಗದಲ್ಲಿ ಮಾಡಬೇಕು ಎಂದು ಸೂಚಿಸಿದರು.
ಸರ್ಕಾರಿ ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಪೀಠೋಪಕರಣ ಒದಗಿಸಲು 100 ಕೋಟಿ ರೂ. ಅನುದಾನ ನೀಡಲಾಗಿದ್ದು, ಉತ್ತಮ ಗುಣಮಟ್ಟದ ಉತ್ತಮ ಪೀಠೋಪಕರಣ ಸರಬರಾಜು ಮಾಡಲು ತಾಲೂಕು ಮಟ್ಟದಲ್ಲಿ ಟೆಂಡರ್ ಕರೆಯಬೇಕು, ಆಯ್ದ ಪ್ರೌಢಶಾಲೆಗಳನ್ನು ಪದವಿಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸುವುದಕ್ಕೆ ಸಂಬಂಧಿಸಿದಂತೆ ಮೊದಲು 100 ಶಾಲೆಗಳನ್ನು ಉನ್ನತೀಕರಣಕ್ಕೆ ಆಯ್ದುಕೊಳ್ಳುವುದು. 1.5 ಕೋಟಿ ರೂ. ರೆಕರಿಂಗ್ ವೆಚ್ಚವಾಗಿ ಪರಿಗಣಿಸಬೇಕು, 20,000 ಅಂಗನವಾಡಿಗಳಲ್ಲಿ ನೂತನ ಪಠ್ಯಕ್ರಮ ಜಾರಿಗೊಳಿಸುವ ಕಾರ್ಯಕ್ರಮವನ್ನು ಜುಲೈ ಮೊದಲನೆ ವಾರದಿಂದ ಪ್ರಾರಂಭಿಸಲು ಸೂಚಿಸಿದರು.
1000 ಗ್ರಾಮ ಪಂಚಾಯತಿಗಳನ್ನು ಸಾಕ್ಷರವನ್ನಾಗಿಸುವ ಕಾರ್ಯಕ್ರಮದಡಿಯಲ್ಲಿ ಡಿಜಿಟಲ್ ಶಿಕ್ಷಣ, ಬ್ಯಾಂಕ್ ವಹಿವಾಟು, ಬರವಣಿಗೆ ಇತ್ಯಾದಿ ದೈನಂದಿನ ಅವಶ್ಯಕತೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಶಾಲಾ ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ ಒದಗಿಸಲು ಬಸ್ ವ್ಯವಸ್ಥೆ ಬಗ್ಗೆ ಮಾತನಾಡಿ, ಪ್ರತಿ ತಾಲ್ಲೂಕಿಗೆ 4 ರಿಂದ 5 ಬಸ್ಗಳ ಖರೀದಿಗೆ ಶಾಸಕರಿಗೆ ಅನುಮತಿ ನೀಡಲಾಗುವುದು. ಮೊದಲ ಹಂತದಲ್ಲಿ ತಾಲೂಕು ಮಟ್ಟದ ಪಿಯುಸಿ ಹಾಗೂ ಡಿಗ್ರಿ ಕಾಲೇಜಿನ ಸಹಯೋಗದೊಂದಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದರು.