ಬೆಂಗಳೂರು: ಮ್ಯಾಟ್ರಿಮೊನಿಯಲ್ ಸೈಟ್ ಮೂಲಕ ಅಮಾಯಕರನ್ನು ಹನಿಟ್ರಾಪ್ ಬಲೆಗೆ ಬೀಳಿಸಿ ವಂಚಿಸುತ್ತಿದ್ದ ಮಾಜಿ ಶಿಕ್ಷಕಿ ಬಂಧಿಸುವಲ್ಲಿ ಪೂರ್ವ ವಿಭಾಗದ ಇಂದಿರಾನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಕವಿತಾ ಬಂಧಿತ ಆರೋಪಿ. ಈಕೆ ಜೀವನ್ ಸಾಥಿ ಮ್ಯಾಟ್ರಿಮೊನಿಯಲ್ ವೆಬ್ ಸೈಟ್ ಮುಖಾಂತರ ಪ್ರೇಮ್ ಡ್ಯಾನಿಯಲ್ ಎಂಬುವವರಿಗೆ ಪರಿಚಯವಾಗಿದ್ದು, ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಕವಿತಾ, ಆತನೊಂದಿಗೆ ಕಳೆದ ಖಾಸಗಿ ದೃಶ್ಯಗಳನ್ನು ಲ್ಯಾಪ್ಟಾಪ್ನಲ್ಲಿ ಸೆರೆಹಿಡಿದು ಚಿನ್ನದ ಸರ ಮತ್ತು ಹಣ ಕೊಡುವಂತೆ ಬ್ಲಾಕ್ಮೇಲ್ ಮಾಡಿದ್ದಳು. ಪ್ರೇಮ್ ಡ್ಯಾನಿಯಲ್ ನಿರಾಕರಿಸಿದಾಗ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಗೆ ಹಾಕಿದ್ದು, ಪ್ರೇಮ್ 3 ಲಕ್ಷ ನಿಡುವುದಾಗಿ ಒಪ್ಪಿಕೊಂಡಿದ್ದಾರೆ.
ಬಳಿಕ ಈ ಬಗ್ಗೆ ಪೂರ್ವ ವಿಭಾಗದ ಇಂದಿರಾನಗರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಪ್ರಕಾರ ಕವಿತಾಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಈಕೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸರ್ಕಾರಿ ಶಿಕ್ಷಕಿಯಾಗಿದ್ದು, ಅಲ್ಲಿಯ ಮುಖ್ಯ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ ಕಾರಣ ಇವರ ವಿರುದ್ಧ ಚಿಕ್ಕಮಗಳೂರಿನ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತದನಂತರ ಕೆಲಸಕ್ಕೆ ಹಾಜರಾಗದೇ ಇರುವ ಕಾರಣಕ್ಕಾಗಿ ಕೆಲಸದಿಂದ ವಜಾಗೊಳಿಸಲಾಗಿತ್ತು.
ಆ ಬಳಿಕ ಜೀವನ್ ಸಾಥಿ ಮ್ಯಾಟ್ರಿಮೊನಿಯಲ್ ವೆಬ್ ಸೈಟ್ ಮುಖಾಂತರ ಶ್ರೀಮಂತ ವ್ಯಕ್ತಿಗಳೊಂದಿಗೆ ಸಲುಗೆ ಬೆಳೆಸಿ, ಹಣಕ್ಕೆ ಬೇಡಿಕೆಯಿಡುತ್ತಿದ್ದಳು. ಹಣ ಕೊಡಲು ನಿರಾಕರಿಸಿದಾಗ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಬೆದರಿಸುತ್ತಿದ್ದಳು. ಈ ಟೀಚರ್ ಮಲ್ಲೇಶ್ವರಂ ಹಾಗೂ ಮಹಾದೇವಪುರ ಠಾಣೆಗಳಲ್ಲಿ ಅಮಾಯಕರ ವಿರುದ್ಧ ದೂರು ದಾಖಲಿಸಿರುವುದು ಬೆಳೆಕಿಗೆ ಬಂದಿದೆ.