ಬೆಂಗಳೂರು : ರಾಜ್ಯ ಕಾಂಗ್ರೆಸ್ ನಾಯಕರು ಸಮಸ್ತ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯ ಸಲ್ಲಿಸಿದ್ದಾರೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿ ಕೆಲ ನಾಯಕರು ನಿನ್ನೆಯೇ ತಮ್ಮ ಶುಭಾಶಯ ತಿಳಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮತ್ತಿತರ ನಾಯಕರು ಇಂದು ಶುಭಾಶಯ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷ ತನ್ನ ಟ್ವಿಟರ್ನಲ್ಲಿ ನಾಡಿನ ಸಮಸ್ತ ಜನತೆಗೆ ತ್ಯಾಗ, ಬಲಿದಾನ ಮತ್ತು ದೇವರಲ್ಲಿ ತಮಗಿರುವ ಸತ್ಯ, ನಿಷ್ಠೆಯ ಸಂಕೇತವಾಗಿ ಆಚರಿಸಲಾಗುವ 'ಬಕ್ರೀದ್' ಹಬ್ಬದ ಶುಭಾಶಯಗಳು ಎಂದಿದೆ.

ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಿನ್ನೆಯೇ ಟ್ವೀಟ್ ಮಾಡಿ ಶುಭಾಶಯ ಸಲ್ಲಿಸಿದ್ದು, ತ್ಯಾಗ ಮತ್ತು ಬಲಿದಾನದ ಮಹತ್ವವನ್ನು ಸಾರುವ ಬಕ್ರೀದ್ ಹಬ್ಬದ ಶುಭಾಶಯಗಳು. ನಮ್ಮೆಲ್ಲರ ಬದುಕಿನ ಮೌಲ್ಯಗಳಾಗಲಿ. ಸುಖ-ಕಷ್ಟಗಳೆರಡರ ಕಾಲದಲ್ಲಿಯೂ ಸೌಹಾರ್ದತೆಯ ಬಂಧ ನಮ್ಮೆಲ್ಲರನ್ನು ಬೆಸೆದಿರಲಿ. ನನ್ನ ಎಲ್ಲ ಮುಸ್ಲಿಂ ಬಂಧುಗಳಿಗೆ ಈದ್ ಮುಬಾರಕ್ ಎಂದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಟ್ವೀಟ್ ಮಾಡಿ, ಸಮಸ್ತ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯಗಳು. ತ್ಯಾಗ ಬಲಿದಾನದ ಪ್ರತೀಕವಾದ ಈ ಹಬ್ಬ, ಬದುಕಿನ ಕಷ್ಟಗಳನ್ನು ದೂರವಾಗಿಸಿ ನಮ್ಮೆಲ್ಲಾ ಆಶಯಗಳನ್ನು ಈಡೇರಿಸಲಿ ಎಂದಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ, ಬಕ್ರೀದ್ ಶುಭಾಶಯಗಳು. ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ರಾಜ್ಯದ ಸಮಸ್ತ ಮುಸಲ್ಮಾನ ಬಾಂಧವರಿಗೆ ಶುಭಾಶಯಗಳನ್ನು ಕೋರುತ್ತೇನೆ. ವಿಶ್ವ ಭಾತೃತ್ವವನ್ನು ಸಾರುವ ಪವಿತ್ರ ಹಬ್ಬವಾದ ಬಕ್ರೀದ್, ನಾಡಿನಲ್ಲಿ ಸ್ನೇಹ ಮತ್ತು ಸೌಹಾರ್ದತೆಯನ್ನು ಮತ್ತಷ್ಟು ಪ್ರಜ್ವಲಿಸಲು ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
