ಬೆಂಗಳೂರು: ಪಕ್ಷ ದುರ್ಬಲವಾಗಿದ್ದ ಉತ್ತರ ಪ್ರದೇಶದಲ್ಲಿ ಸಾಮಾಜಿಕ ಸಮೀಕರಣದಿಂದ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಗಿದೆ .ಇಲ್ಲಿಯೂ ಪಕ್ಷ ದುರ್ಬಲವಾಗಿರುವ ಜಿಲ್ಲೆಗಳಲ್ಲಿ ಅದು ಸಾಧ್ಯವೇ? ಎಂಬ ಅವಲೋಕನ ಮಾಡುವಂತೆ ಪಕ್ಷದ ಪದಾಧಿಕಾರಿಗಳಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕರೆ ನೀಡಿದರು.
ನಗರದ ಓಲ್ಡ್ ಏರ್ಪೋರ್ಟ್ ರಸ್ತೆಯ ಹೋಟೆಲ್ ರಾಯಲ್ ಆರ್ಕಿಡ್ನಲ್ಲಿ ಭಾನುವಾರ ನಡೆದ ಭಾರತೀಯ ಜನತಾ ಪಾರ್ಟಿಯ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಅಮಿತ್ ಶಾ ಅವರಿಗೆ ಉತ್ತರ ಪ್ರದೇಶದ ಜವಾಬ್ದಾರಿ ಕೊಟ್ಟಾಗ ಅಲ್ಲಿ ಬಿಜೆಪಿಯ ಕೇವಲ 10 ಜನ ಸಂಸದರಿದ್ದರು ಹಾಗೂ 41 ಜನ ಶಾಸಕರಿದ್ದರು. ನಂತರದ ಚುನಾವಣೆಯಲ್ಲಿ 80 ಸಂಸದರ ಸ್ಥಾನಗಳಲ್ಲಿ 73 ಸ್ಥಾನ ಬಿಜೆಪಿಗೆ ಮತ್ತು ಮಿತ್ರಪಕ್ಷಕ್ಕೆ 2 ಸ್ಥಾನ ಲಭಿಸಿತು. ಸಾಮಾಜಿಕ ಸಮೀಕರಣವೇ ಇದಕ್ಕೆ ಕಾರಣ. ಇಂಥ ಸಾಮಾಜಿಕ ಸಮೀಕರಣ ನಮ್ಮ ಜಿಲ್ಲೆಯಲ್ಲೂ ಸಾಧ್ಯವೇ ಎಂಬ ಅವಲೋಕನ ಅಗತ್ಯ ಎಂದು ತಿಳಿಸಿದರು.
ದಕ್ಷಿಣ ಭಾರತದಲ್ಲಿ ಕರ್ನಾಟಕ ರಾಜ್ಯವು ಬಿಜೆಪಿಯ ಹೆಬ್ಬಾಗಿಲು ಎಂಬ ಮಾತಿದೆ. ರಾಜಕೀಯವಾಗಿ ಹಿಂದಿರುವ ಜಿಲ್ಲೆಗಳಲ್ಲಿ ಬಿಜೆಪಿ ಬೆಳೆಯಲು ನಮ್ಮ ಆಲೋಚನೆ ಏನು? ಪಕ್ಷದ ಬೆಳವಣಿಗೆ ಮತ್ತು ಸಶಕ್ತೀಕರಣಕ್ಕೆ ನಮ್ಮ ಕಾರ್ಯತಂತ್ರಗಳೇನು ಎನ್ನುವತ್ತ ಆಲೋಚನೆ ಇರಬೇಕು ಎಂದರು.
ಓದಿ: ಬಿಜೆಪಿ ಯಾರನ್ನೂ ಕಡೆಗಣಿಸಲ್ಲ, ನಿಷ್ಠೆಯಿಂದ ಕೆಲಸ ಮಾಡಿ: ಪ್ರಕೋಷ್ಠ ಪ್ರಮುಖರಿಗೆ ಕಟೀಲ್ ಕರೆ
ಪಕ್ಷದ ಕಾರ್ಯ ವಿಸ್ತರಣೆ, ಗುಣಾತ್ಮಕ ಬದಲಾವಣೆ, ವ್ಯಕ್ತಿಗಳಲ್ಲಿ ಉತ್ತಮ ಗುಣ ಬೆಳೆಸುವುದು, ಯೋಗ್ಯ ವ್ಯಕ್ತಿಗಳನ್ನು ಮೇಲೆ ತರುವ ಕೆಲಸವನ್ನು ಪಕ್ಷ ಮಾಡಬೇಕು. ಪರಿಶ್ರಮದ ಕೆಲಸ ನಮ್ಮದಾದಾಗ ನಮಗೆ ಗೌರವ ಬರುತ್ತದೆ. ಸಾಂಸ್ಥಿಕ ವ್ಯವಸ್ಥೆಯ ಜೊತೆಗೆ ಜೋಡಿಸಿಕೊಂಡು ಕೆಲಸ ಮಾಡಿದಾಗ ನಮಗೆ ಗೌರವ ಲಭಿಸುತ್ತದೆ ಎಂದರು. ಕಾರ್ಯಕರ್ತ ಅಥವಾ ಮುಖಂಡರನ್ನು ಕೇವಲ ವೇದಿಕೆಯ ಮೇಲಷ್ಟೇ ಗುರುತಿಸಬೇಕೆಂಬ ಯೋಚನೆ ಸರಿಯಲ್ಲ. ವೇದಿಕೆಯ ಕೆಳಗೆ ಸಭೆಯಲ್ಲಿದ್ದಾಗ ಕಾರ್ಯಕರ್ತರನ್ನು ವೈಯಕ್ತಿಕ ನೆಲೆಯಲ್ಲಿ ಗುರುತಿಸಿದರೂ ಅದು ಸಂಘಟನೆಗೆ ಶಕ್ತಿ ತುಂಬುತ್ತದೆ. ಶಕ್ತಿ ಇರುವವರಲ್ಲಿ ಭಕ್ತಿ ಬೆಳೆಸಬೇಕು. ಭಕ್ತಿ ಇರುವವರಿಗೆ ಶಕ್ತಿ ತುಂಬಬೇಕು ಎಂದು ಅವರು ತಿಳಿಸಿದರು.
ಅವಕಾಶ ಲಭಿಸುತ್ತಾ ಸಾಗಿದಾಗ ವಿಶ್ವಾಸವೂ ಹೆಚ್ಚುತ್ತದೆ. ರಾಜಕೀಯ ನೇತೃತ್ವ ಬೆಳೆಸುವ ಸಂಘಟನೆ ನಮ್ಮದು. ಪಕ್ಷ ಕೇಂದ್ರಿತ ನೇತೃತ್ವವನ್ನು ಜನಕೇಂದ್ರಿತವಾಗಿ ಬೆಳೆಸುವ ಯೋಚನೆ ನಮ್ಮದಿರಬೇಕು ಎಂದು ತಿಳಿಸಿದರು. ನಾವು ಮಹಾಭಾರತದ ಪಾತ್ರಗಳ ವಿಶ್ಲೇಷಣೆ ಮಾಡಬೇಕು. ಮಹಾಭಾರತದ ದೃಷ್ಟಾಂತಗಳು ಸಾರ್ವಕಾಲಿಕವಾದವು. ಒಳ್ಳೆಯದು ಮತ್ತು ಕೆಟ್ಟದ್ದಕ್ಕೆ ಅವು ಉದಾಹರಣೆಯಾಗುತ್ತವೆ. ಸಂಘಟನೆಯ ನೀತಿಪಾಠವನ್ನು ಅದು ತಿಳಿಸಿಕೊಡುತ್ತದೆ ಎಂದರು.
ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಉಪಾಧ್ಯಕ್ಷ ಅರವಿಂದ ಲಿಂಬಾವಳಿ, ಶಾಸಕ ಎಸ್.ರಘು, ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ಕುಮಾರ್, ಬೆಂಗಳೂರು ಕೇಂದ್ರ ಅಧ್ಯಕ್ಷ ಮಂಜುನಾಥ್ ವೇದಿಕೆಯಲ್ಲಿದ್ದರು.