ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಸಲ್ಲಿಸುವ ದಿನದಂದು ಕಾವೇರಿ ನಿವಾಸ ಬಿಜೆಪಿ ನಾಯಕರಿಂದ ತುಂಬಿ ತುಳುಕುತ್ತಿತ್ತು ಅದಾದ ನಂತರ ಮತ್ತೆ ಅಂತಹ ಸನ್ನಿವೇಶ ನಿರ್ಮಾಣವಾಗಿದ್ದು ಬುಧವಾರದಂದು. ಪಕ್ಷದ ಸಂಸದೀಯ ಮಂಡಳಿ ಸದಸ್ಯರಾಗಿ ನೇಮಕಗೊಂಡ ಹಿನ್ನೆಲೆ ಎಲ್ಲ ನಾಯಕರು ಕಾವೇರಿಗೆ ಆಗಮಿಸಿ ಶುಭ ಕೋರಿದರು. ಹೀಗಾಗಿ ಕಾವೇರಿ ಮತ್ತೆ ರಾಜ್ಯ ರಾಜಕೀಯ ಚಟುವಟಿಕೆಯ ಕೇಂದ್ರವಾಗಿ ಬದಲಾಗಿದೆ.

2021 ರ ಆಗಸ್ಟ್ 26 ರಂದು ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅಂದು ಅವರ ಅಧಿಕೃತ ನಿವಾಸ ಕಾವೇರಿ ತುಂಬಿ ತುಳುಕಿತ್ತು. ಅದಾದ ನಂತರ ಮತ್ತೆ ಅಂತಹ ವಾತಾವರಣ ಕಾವೇರಿಯಲ್ಲಿ ಇರಲಿಲ್ಲ. ಬಹುತೇಕ ಕಾವೇರಿ ನಿವಾಸ ಖಾಲಿ ಖಾಲಿಯಾಗಿಯೇ ಇರುತ್ತಿತ್ತು. ಆಗೊಮ್ಮೆ.. ಈಗೊಮ್ಮ.. ಕೆಲ ಆಪ್ತರು ಮಾತ್ರ ಭೇಟಿ ನೀಡುತ್ತಿದ್ದರು. ಯಡಿಯೂರಪ್ಪ ನೆಪ ಮಾತ್ರ ಎನ್ನುವ ಮಟ್ಟಿಗೆ ಕಾವೇರಿ ಬಣಗುಡುತ್ತಿತ್ತು. ಆದರೆ ಒಂದು ವರ್ಷದಲ್ಲೇ ಮತ್ತೆ ಕಾವೇರಿ ಕಳೆ ಕಟ್ಟಿದೆ. ಯಡಿಯೂರಪ್ಪ ಅವರ ಕಾವೇರಿ ನಿವಾಸ ಮತ್ತೆ ರಾಜಕೀಯ ಚಟುವಟಿಕೆಯ ಕೇಂದ್ರ ಬಿಂದುವಾಗಿದೆ.

ಬುಧವಾರ ಮಧ್ಯಾಹ್ನ ಬಿಜೆಪಿ ಸಂಸದೀಯ ಮಂಡಳಿ ಪಟ್ಟಿ ಹೊರಬೀಳುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಮಾಜಿ ಸಿಎಂಗಳಾದ ಸದಾನಂದಗೌಡ, ಜಗದೀಶ್ ಶೆಟ್ಟರ್ ಸೇರಿದಂತೆ ಪಕ್ಷದ ಹಲವು ನಾಯಕರು, ಸಚಿವರು ಹಾರ ತುರಾಯಿ ಹಿಡಿದು ಯಡಿಯೂರಪ್ಪ ನಿವಾಸಕ್ಕೆ ದೌಡಾಯಿಸಿ ಅಭಿನಂದಿಸಿದರು.

ಇನ್ನು 9 ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಟಿಕೆಟ್ ಗಿಟ್ಟಿಸಿಕೊಳ್ಳಲು ಈಗ ಯಡಿಯೂರಪ್ಪ ಬೆಂಬಲ ಅತ್ಯಗತ್ಯವಾಗಿದೆ. ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳುವುದು ಬಿಜೆಪಿ ಸಂಸದೀಯ ಮಂಡಳಿ ಮತ್ತು ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಎರಡರಲ್ಲಿಯೂ ಯಡಿಯೂರಪ್ಪ ಸದಸ್ಯರಾಗಿದ್ದು ಅವರ ಅಭಿಪ್ರಾಯ ಮುಖ್ಯವಾಗಲಿದೆ. ಹಾಗಾಗಿ ಯಡಿಯೂರಪ್ಪ ಹಿಂದೆ - ಮುಂದೆ ಓಡಾಡಲು ಈಗಲೇ ನಾಯಕರು ಮುಂದಾಗಿದ್ದಾರೆ.

ಇದಕ್ಕೂ ಮುನ್ನ ಪಕ್ಷದ ಕಚೇರಿಗೆ ಭೇಟಿ ನೀಡಿದ ಮಾಜಿ ಸಿಎಂ ಯಡಿಯೂರಪ್ಪ ನಂತರ ಕೇಶವಕೃಪಾಗೆ ತೆರಳಿ ಸಂಘ ಪರಿವಾರದ ಹಿರಿಯರ ಜೊತೆ ಮಾತುಕತೆ ನಡೆಸಿದರು. ಅಧಿಕೃತ ನಿವಾಸ ಕಾವೇರಿಯಿಂದ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಯಡಿಯೂರಪ್ಪ ಮತ್ತು ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಟ್ಟಿಗೆ ಒಂದೇ ಕಾರಿನಲ್ಲಿ ಆಗಮಿಸಿದ್ದರು. ಬಿಜೆಪಿ ಕಚೇರಿಯಲ್ಲಿ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ನಾಯಕರು ನಂತರ ಕೆಲಕಾಲ ಅನೌಪಚಾರಿಕ ಮಾತುಕತೆ ನಡೆಸಿದರು.

ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬೊಮ್ಮಾಯಿ, ಕಟೀಲ್ ಸೇರಿಕೊಂಡು ದೇಶ ವಿಭಜನೆಯ ಕರಾಳ ನೆನಪು ಕುರಿತ ಚಿತ್ರಪ್ರದರ್ಶನ ವೀಕ್ಷಿಸಿದರು. ನಂತರ ಮೂವರೂ ನಾಯಕರು ಒಂದೇ ಕಾರಿನಲ್ಲಿ ಚಾಮರಾಜಪೇಟೆಯಲ್ಲಿರುವ ಆರ್ಎಸ್ಎಸ್ ಕಚೇರಿ ಕೇಶವಕೃಪಾಗೆ ತೆರಳಿದರು. ಸಂಘ ಪರಿವಾರದ ಹಿರಿಯರ ಜೊತೆ ಮಾತುಕತೆ ನಡೆಸಿದರು.
ಓದಿ: ವಿಧಾನಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ: ಗುರುವಾರ ರಾಜ್ಯ ಬಿಜೆಪಿ ಪದಾಧಿಕಾರಿಗಳು, ಮಾಜಿ ಶಾಸಕರ ಸಭೆ