ಬೆಂಗಳೂರು: ರಾಜಧಾನಿಯ ಆಡಳಿತ ಚುಕ್ಕಾಣಿ ಹಿಡಿಯಲು ಬಿಬಿಎಂಪಿ ಚುನಾವಣೆ ದಿನೇ ದಿನೆ ಚುರುಕುಗೊಂಡಿರುವ ಹಿನ್ನೆಲೆ ಮತದಾರರನ್ನು ಆಕರ್ಷಿಸಲು ಅಭ್ಯರ್ಥಿಗಳು ಪ್ರವಾಸದ ಕಾರ್ಯತಂತ್ರದ ಮೊರೆ ಹೋಗಿದ್ದಾರೆ. ಚುನಾವಣೆ ಆಕಾಂಕ್ಷಿಗಳು, ಆಯಾ ಪಕ್ಷದಲ್ಲಿ ಟಿಕೆಟ್ ಖಚಿತವಾಗಿ ಪಡೆಯುತ್ತೇವೆ ಎನ್ನುವ ಘಟಾನುಘಟಿಗಳು ತಮ್ಮ ವಾರ್ಡ್ನ ಕಾರ್ಯಕರ್ತರು, ಮುಖಂಡರನ್ನು ಪ್ರವಾಸಕ್ಕೆ ಕಳುಹಿಸುವ ತಂತ್ರ ಅನುಸರಿಸಲು ಮುಂದಾಗಿದ್ದು, ಅದರಲ್ಲೂ ವಿಶೇಷವಾಗಿ ಗೋವಾ ಕಡೆ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಹೆಚ್ಎಎಲ್ ತರಕಾರಿ ಮತ್ತು ಹಣ್ಣುಗಳ ಮಾರುಕಟ್ಟೆ ಸಂಘದ ಅಧ್ಯಕ್ಷರೂ ಆದ ಹೆಚ್ಎಎಲ್ ವಾರ್ಡ್ನ ಆಕಾಂಕ್ಷಿ ಎಸ್. ರಮೇಶ್ ಅವರು ತಮ್ಮ ವಾರ್ಡ್ನ 150 ಮಂದಿಯನ್ನು ಇತ್ತೀಚೆಗೆ ಎರಡು ದಿನಗಳ ಕಾಲ ಗೋವಾ ಪ್ರವಾಸಕ್ಕೆ ಕರೆದೊಯ್ದು, ವಾಪಸಾಗಿದ್ದಾರೆ ಎಂಬುದು ಬೆಳಕಿಗೆ ಬಂದಿತ್ತು.
![Tour to Goa](https://etvbharatimages.akamaized.net/etvbharat/prod-images/15471866_bbmp.jpg)
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರ ಕಟ್ಟಾ ಅನುಯಾಯಿ ರಮೇಶ್ ಅನೇಕ ಮಹಿಳೆಯರನ್ನು ಪ್ರವಾಸಕ್ಕೆ ಕರೆದೊಯ್ಯಲು ಮುಂದಾಗಿದ್ದರು. ಆದರೆ, ವಿವಾದ ಉಲ್ಬಣಗೊಳ್ಳುವ ಕಾರಣ ಪುರುಷರನ್ನು ಮಾತ್ರ ಕರೆದೊಯ್ದಿದ್ದಾರೆ. ಮುಂದಿನ ದಿನಗಳಲ್ಲಿ ವಾರ್ಡ್ನ ಮಹಿಳಾ ಕಾರ್ಯಕರ್ತರನ್ನು ವೆಲಂಕಣಿ ಮತ್ತು ರಾಮೇಶ್ವರಂ ಧಾರ್ಮಿಕ ಪ್ರವಾಸಕ್ಕೆ ಕರೆದೊಯ್ಯಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಕೋವಿಡ್ ಸಮಯದಲ್ಲೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ರಮೇಶ್, ಸಾವಿರಾರು ಆಹಾರ ಕಿಟ್ಗಳನ್ನು ಹಂಚಿಕೆ ಮಾಡಿದ್ದರು. ಜತೆಗೆ ಆರೋಗ್ಯ ಸೇವೆಗಳಿಗೂ ಒತ್ತು ನೀಡಿ, ಈ ಭಾಗದ ಜನರ ಪ್ರಶಂಸೆಗೆ ಪಾತ್ರರಾಗಿದ್ದರು. ಈ ಕುರಿತು ಮಾತನಾಡಿರುವ ರಮೇಶ್ ಗೋವಾ ಪ್ರವಾಸವನ್ನು ಬಹಳ ಹಿಂದೆಯೇ ಯೋಜಿಸಿದ್ದೇವೆ. ಚುನಾವಣಾ ನೀತಿ ಸಂಹಿತೆ ಘೋಷಣೆಯಾದ ನಂತರ ಹೋಗಲು ಸಾಧ್ಯವಾಗಲ್ಲವೆಂದು 150 ಮಂದಿಯನ್ನು ಪ್ರವಾಸಕ್ಕೆ ಕರೆದೊಯ್ಯಲಾಯಿತು ಎಂದಿದ್ದಾರೆ.
ಇಂಟರ್ನ್ಯಾಷನಲ್ ಸೆಂಟರ್ ಗೋವಾ ಹೆಸರಿನಲ್ಲಿ ರೆಸಾರ್ಟ್ ಅನ್ನು ಕಾಯ್ದಿರಿಸಲಾಗಿತ್ತು. ದಿನಕ್ಕೆ ಒಂದು ಕೊಠಡಿಗೆ 4,500 ರೂ. ಬಾಡಿಗೆ. ಇದರಲ್ಲಿ ಮೂರು ವ್ಯಕ್ತಿಗಳಿಗೆ ಉಚಿತ ಉಪಹಾರವೂ ಇತ್ತು. ಬೆಂಗಳೂರಿನಿಂದ ಅಡುಗೆಯವರನ್ನು ಕರೆದುಕೊಂಡು ಹೋಗಿದ್ದೆವು. ಇಲ್ಲದಿದ್ದರೆ ಆಹಾರದ ವೆಚ್ಚ 1.5 ಲಕ್ಷಗಳಷ್ಟು ಹೆಚ್ಚಾಗುತ್ತಿತ್ತು. ಮೂರು ಬಸ್ಸುಗಳ ಪ್ರಯಾಣದ ವೆಚ್ಚ 1.39 ಲಕ್ಷಗಳಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ರಮೇಶ್ ಈ ಹಿಂದೆ ಬಿಜೆಪಿಯ ಮಾಜಿ ಶಾಸಕ ನಂದೀಶ್ ರೆಡ್ಡಿ ಅವರೊಂದಿಗೆ ಗುರುತಿಸಿಕೊಂಡಿದ್ದರು. ನಂತರ 2013ರ ವಿಧಾನಸಭಾ ಚುನಾವಣೆಯಲ್ಲಿ ಕೆಆರ್ ಪುರಂನಿಂದ ರೆಡ್ಡಿ ಅವರನ್ನು ಸೋಲಿಸಿದ ಬಸವರಾಜ್ ಅವರೊಂದಿಗೆ ಸೇರಿಕೊಂಡಿದ್ದಾರೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಒಂದು ಅಥವಾ ಎರಡು ದಿನಗಳಲ್ಲಿ ವಾರ್ಡ್ ಮರುವಿಂಗಡಣೆ ಕರಡನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ. ಡಿಲಿಮಿಟೇಶನ್ ಮತ್ತು ಒಬಿಸಿ ಆಧಾರಿತ ಮೀಸಲಾತಿ ಪೂರ್ಣಗೊಂಡ ನಂತರ, ರಾಜ್ಯ ಚುನಾವಣಾ ಆಯೋಗವು ಬಿಬಿಎಂಪಿ ಚುನಾವಣೆಯನ್ನು ಪ್ರಾರಂಭಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಬಿಬಿಎಂಪಿ ಸಲ್ಲಿಸಿದ್ದ ವಾರ್ಡ್ ಮರು ವಿಂಗಡಣೆ ಕರಡು ವಾಪಸ್ ಕಳುಹಿಸಿದ ಸರ್ಕಾರ..