ಬೆಂಗಳೂರು: ನಗರದ ಗುಂಡಿಗಳನ್ನು 10 ದಿನಗಳಲ್ಲಿ ಸರಿಪಡಿಸುವಂತೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಎಲ್ಲಾ ವಲಯ ಮುಖ್ಯ ಎಂಜಿನಿಯರ್ಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಸೋಮವಾರ ಬಿಬಿಎಂಪಿ ಪ್ರಧಾನ ಕಚೇರಿಯಲ್ಲಿ ಗುಂಡಿಗಳು, ಬೀದಿ ದೀಪಗಳ ಅಳವಡಿಕೆ, ಯಾಂತ್ರಿಕ ಗುಡಿಸುವ ಯಂತ್ರಗಳು ಮತ್ತು ವಾರ್ಷಿಕ ರಸ್ತೆ ನಿರ್ವಹಣೆ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನೆಡೆಯಿತು.
ಈ ಸಭೆಯಲ್ಲಿ ರಸ್ತೆ ಗುಂಡಿಗಳನ್ನು ಸರಿಪಡಿಸುವುದರ ಜೊತೆಗೆ ಬಿಬಿಎಂಪಿ ಮಟ್ಟದಲ್ಲಿ ಬೀದಿ ದೀಪಗಳ ನಿರ್ವಹಣೆ ಅಪೇಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲವಾದ್ದರಿಂದ, ಇದಕ್ಕಾಗಿ ಟೆಂಡರ್ ಪ್ರಕ್ರಿಯೆಯನ್ನು ವೇಗಗೊಳಿಸಲೂ ಸೂಚನೆ ನೀಡಲಾಗಿದ್ದು, ಬೀದಿ ದೀಪ ಅಳವಡಿಕೆಗೆ ಆಯಾ ವಲಯಗಳ ಮುಖ್ಯ ಎಂಜಿನಿಯರ್ ಗಮನಹರಿಸಬೇಕು ಎಂದು ಸೂಚನೆ ನೀಡಲಾಯಿತು.
ಇದನ್ನೂ ಓದಿ: 'ಮಿಷನ್-2020': ಘನತ್ಯಾಜ್ಯ ಸಮಸ್ಯೆ ನಿವಾರಣೆಗೆ ಬಿಬಿಎಂಪಿ ಮಾಸ್ಟರ್ ಪ್ಲಾನ್
ಬಿಬಿಎಂಪಿ ಮಿತಿಯಲ್ಲಿ ಎಷ್ಟು ಪ್ರಮುಖ ಹಾಗೂ ಇತರೆ ರಸ್ತೆಗಳು, ಸಂಬಂಧಪಟ್ಟ ಯಂತ್ರಗಳಿವೆ ಎಂಬ ಬಗ್ಗೆ ವರದಿಯನ್ನು ಸಿದ್ಧಪಡಿಸುವಂತೆ ರಸ್ತೆ ಮೂಲಸೌಕರ್ಯ ಕಾರ್ಯನಿರ್ವಾಹಕ ಎಂಜಿನಿಯರ್ಗಳಿಗೆ ನಿರ್ದೇಶನ ನೀಡಲಾಗಿದೆ.
ರಸ್ತೆಗಳ ಸೂಕ್ತ ನಿರ್ವಹಣೆಗಾಗಿ ಟೆಂಡರ್ ಪ್ರಕ್ರಿಯೆಯನ್ನು ವೇಗಗೊಳಿಸುವಂತೆ ಮತ್ತು ನಿರ್ವಹಣಾ ಕಾರ್ಯವನ್ನು ಪ್ರಾರಂಭಿಸಲು ಅಧಿಕಾರಿಗಳಿಗೆ ಆದೇಶ ನೀಡಲಾಗಿದ್ದು, ಪ್ರಮುಖ ಆರ್ಟಿರಿಯಲ್ ರಸ್ತೆಗಳಲ್ಲಿ ಕರ್ಬ್ ಸ್ಟೋನ್ಗಳಿಗೆ ಬಣ್ಣ ಬಳಿಯುವ ಹಾಗೂ ಲೈನ್ ಮಾರ್ಕಿಂಗ್ ಮಾಡುವ ಸಂಬಂಧ ಯೋಜನೆಯನ್ನು ರೂಪಿಸಿ ಸಮರೋಪಾದಿಯಲ್ಲಿ ಕೆಲಸ ಮಾಡಲು ಸೂಕ್ತ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಬಿಬಿಎಂಪಿ ಆಡಳಿತಾಧಿಕಾರಿ ಹೇಳಿದರು.