ಬೆಂಗಳೂರು: ಎಸಿಬಿ ಮೇಲಿನ ಭ್ರಷ್ಟಾಚಾರ ಆರೋಪವನ್ನು ತೀವ್ರ ತರಾಟೆಗೆ ತೆಗೆದುಕೊಂಡು ವರ್ಗಾವಣೆ ಬೆದರಿಕೆ ವಿಚಾರವನ್ನು ಬಹಿರಂಗವಾಗಿ ತಿಳಿಸಿರುವ ನ್ಯಾ.ಎಚ್.ಸಿ.ಸಂದೇಶ್ ಅವರನ್ನು ಬುಧವಾರ ಆಮ್ ಆದ್ಮಿ ಪಕ್ಷದ ರಾಜ್ಯ ಕಾನೂನು ಘಟಕದ ಮುಖಂಡರು ಭೇಟಿ ಮಾಡಿ, ನೈತಿಕ ಬೆಂಬಲ ವ್ಯಕ್ತಪಡಿಸಿದರು.
ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ರಾಜ್ಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ, "ಹೈಕೋರ್ಟ್ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಘಟನೆ ನಡೆದಿರುವುದು ಅತ್ಯಂತ ಆಘಾತಕಾರಿ. ಭ್ರಷ್ಟ ಬಿಜೆಪಿಯ 40% ಸರ್ಕಾರವು ಉಚ್ಚ ನ್ಯಾಯಾಲಯವನ್ನೂ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಅವ್ಯಾಹತವಾಗಿ ಅಕ್ರಮ ನಡೆಸಲು ಯತ್ನಿಸುತ್ತಿದೆ. ನ್ಯಾಯಾಧೀಶರ ಮೇಲೆ ಒತ್ತಡ ಹಾಕುವ ಮೂಲಕ ಸಂವಿಧಾನದ ಆಶಯವನ್ನು ಬುಡಮೇಲು ಮಾಡುತ್ತಿದೆ. ಸರ್ಕಾರದ ಕುತಂತ್ರಕ್ಕೆ ಮಣಿಯದ ನ್ಯಾ.ಎಚ್.ಸಿ.ಸಂದೇಶ್ ಅವರಿಗೆ ಪಕ್ಷವು ನೈತಿಕ ಬೆಂಬಲ ನೀಡುತ್ತಿದೆ" ಎಂದರು.
ಪಕ್ಷದ ಕಾನೂನು ಘಟಕದ ಮುಖಂಡ ಲಕ್ಷ್ಮೀಕಾಂತ್ ರಾವ್ ಮಾತನಾಡಿ, "ಜನರನ್ನು ಹಾಗೂ ಜನರ ತೆರಿಗೆ ಹಣವನ್ನು ರಕ್ಷಿಸಬೇಕಾದ ಎಸಿಬಿಯು ಕಳಂಕಿತರನ್ನು ರಕ್ಷಿಸುತ್ತಿದೆ. ಬಳ್ಳಾರಿಯಲ್ಲಿ ಗಣಿ ಅಕ್ರಮಗಳಿಗೆ ಸಹಕರಿಸಿದ ಗುರುತರ ಆರೋಪ ಹೊತ್ತಿರುವ ಸೀಮಂತ್ ಕುಮಾರ್ ಸಿಂಗ್ ಎಸಿಬಿಯ ಎಡಿಜಿಪಿ ಆಗಿರುವುದು ನಾಡಿನ ದುರಾದೃಷ್ಟ. ಬೇಲಿಯೇ ಎದ್ದು ಹೊಲ ಮೇಯಿತು ಎಂಬ ಗಾದೆಯಂತೆ, ಭ್ರಷ್ಟರ ನೇತೃತ್ವದಲ್ಲಿ ಎಸಿಬಿಯೇ ಭ್ರಷ್ಟಾಚಾರದಲ್ಲಿ ಮುಳುಗಿದೆ" ಎಂದು ಆರೋಪಿಸಿದರು.
ಇದನ್ನೂ ಓದಿ: 'ವರ್ಗಾವಣೆ ಬೆದರಿಕೆಗೆ ಬಗ್ಗಲ್ಲ': ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ದಿಟ್ಟ ನುಡಿ