ಬೆಂಗಳೂರು : ದೇಶದಲ್ಲಿರುವ ಎಲ್ಲಾ ಕುರುಬ ಸಮಾಜದ ಕುಲಬಾಂಧವರನ್ನು ಒಂದೇ ವೇದಿಕೆಯಲ್ಲಿ ಸಂಘಟಿಸಬೇಕೆಂಬ ಧ್ಯೇಯೋದ್ದೇಶದಿಂದ 'ಶಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ' ಎಂಬ ಸಂಘಟನೆ ಆರಂಭವಾಗಿದೆ. ಇದೀಗ ಅದರ 5ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಅಕ್ಟೋಬರ್ 2ರಂದು ಆಯೋಜಿಸಲಾಗಿದೆ ಎಂದು ಶಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ರಾಷ್ಟ್ರೀಯ ಅಧ್ಯಕ್ಷ ಹೆಚ್ ವಿಶ್ವನಾಥ್ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕವೂ ಸೇರಿ ಹರಿದು ಹಂಚಿ ಹೋಗಿರುವ ಸಮುದಾಯವನ್ನು ಬೆಸೆಯುವ ಸಂಸ್ಥೆ ಶಫರ್ಡ್ಸ್ ಇಂಡಿಯ ಇಂಟರ್ ನ್ಯಾಷನಲ್ ಆಗಿದೆ. ನಾವೆಲ್ಲ ದೇವರಾಜ್ ಅರಸು ಅವರ ಸಿದ್ಧಾಂತದಲ್ಲಿ ಬೆಳೆದು ಬಂದವರು. ಬೇರೆ ಜನಾಂಗವನ್ನು ಪ್ರೀತಿಸುತ್ತಲೇ ಕುರುಬ ಸಮುದಾಯದ ಅಭಿವೃದ್ಧಿ ಪಡಿಸಲು ಪ್ರಯತ್ನ ನಡೆಸಿದ್ದೇವೆ ಎಂದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವನ್ನು ಅಕ್ಟೋಬರ್ 2ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3ಗಂಟೆಯವರೆಗೆ ವರ್ಚುವಲ್ ವಿಧಾನದ ಮೂಲಕ ಆಚರಿಸಲಾಗುತ್ತಿದೆ. ವಾಟ್ಸ್ಆ್ಯಪ್, ಟ್ವಿಟರ್, ಫೇಸ್ಬುಕ್ ಮತ್ತಿತರ ಜಾಲತಾಣಗಳಲ್ಲಿ ಕಾರ್ಯಕ್ರಮ ವೀಕ್ಷಿಸಬಹುದು ಎಂದರು.
ರಾಜ್ಯದ ನಾಲ್ಕು ದಿಕ್ಕುಗಳಲ್ಲಿ ಕನಕ ಪೀಠಗಳನ್ನು ಸ್ಥಾಪಿಸಿದ್ದೇವೆ. ನಾನು ಸಂಸದನಾಗಿದ್ದಾಗ ಯುರೋಪಿನ ಪ್ರವಾಸ ಮಾಡುತ್ತಾ ಹೋದೆ. ಲಂಡನ್ಗೆ ಹೋದ ಸಂದರ್ಭದಲ್ಲಿ ಹಲವಾರು ವಿಚಾರಗಳು ನನ್ನ ಗಮನಕ್ಕೆ ಬಂದಿತ್ತು. 750 ವರ್ಷ ಇತಿಹಾಸವಿರುವ ಲಂಡನ್ನ ಪಾರ್ಲಿಮೆಂಟ್ ನೋಡಿದಾಗ ಅಲ್ಲಿನ ಸ್ಪೀಕರ್ ಕುರಿ ಉಣ್ಣೆಯ ಮೇಲೆ ಕುಳಿತುಕೊಳ್ಳುತ್ತಾರೆ. ಅಲ್ಲಿನ ಸರ್ಕಾರಗಳು ಕುರುಬರಿಗೆ ಸಾಕಷ್ಟು ಸವಲತ್ತುಗಳನ್ನು ನೀಡುತ್ತಿವೆ ಎಂದು ಮಾಹಿತಿ ನೀಡಿದರು.
ಎಸ್ಟಿ ಹೋರಾಟಕ್ಕೆ ಸಮುದಾಯ ಅಣಿ : ಕುರುಬರು ಕುಲ ಶಾಸ್ತ್ರದ ಮೂಲಕ ರೂಪಗೊಂಡ ಒಂದು ಸಮುದಾಯ. ನಮ್ಮಲ್ಲಿ ಸೂರಿಲ್ಲದ, ನೆಲೆಯಿಲ್ಲದ ಜನರನ್ನು ಪರಿಶಿಷ್ಟ ಜನಾಂಗಕ್ಕೆ ಸೇರಿಸಬೇಕೆಂಬ ಸಂಘಟಿತ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಹೋರಾಟಕ್ಕೆ ನಾವು ಅಣಿಯಾಗಬೇಕು. 5ನೇ ವಾರ್ಷಿಕೋತ್ಸವದಲ್ಲಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳುತ್ತೇವೆ. ಅಕ್ಟೋಬರ್ 2ರಂದು ವಾರ್ಷಿಕೋತ್ಸವ ನಡೆಯಲಿದೆ.
ಬೇರೆ ದೇಶಗಳಲ್ಲಿಯೂ ಈ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲಾ ರಾಷ್ಟ್ರಗಳೊಂದಿಗೆ ಸಂಪರ್ಕ ಹೊಂದಲು ಪ್ರಯತ್ನ ಮಾಡುತ್ತೇವೆ ಎಂದರು. ಶಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ರಾಷ್ಟ್ರೀಯ ಸಂಚಾಲಕ, ಮಾಜಿ ಸಚಿವ ಹೆಚ್ ಎಂ ರೇವಣ್ಣ ಮಾತನಾಡಿ, ಕುರುಬ ಸಮುದಾಯ ರಾಷ್ಟ್ರಮಟ್ಟದಲ್ಲಿ ರಾಜಕೀಯವಾಗಿ ಸಾಕಷ್ಟು ಮುಂಚೂಣಿಗೆ ಬಂದಿವೆ. ಬೇರೆ ರಾಜ್ಯಗಳಲ್ಲಿ ಬೇರೆ ಹೆಸರಲ್ಲಿ ಕುರುಬರನ್ನು ಕರೆಯಲಾಗುತ್ತಿದೆ.
ಆಂಧ್ರದಲ್ಲಿ ಕುರುಮ, ತಮಿಳುನಾಡಿನಲ್ಲಿ ಕುರುಮನ್ ಅಂತಾ ಕರೆಯುತ್ತಾರೆ. ಮಹಾರಾಷ್ಟ್ರದಲ್ಲಿ ಧನಗರ್, ಗುಜರಾತ್ನಲ್ಲಿ ರಬಾರಿ, ಬಂಗಾಳಿಯಲ್ಲಿ ರಖಲ್ ಎಂದು ಕರೆಯುತ್ತಾರೆ. ಉತ್ತರಪ್ರದೇಶದಲ್ಲಿ ಪಾಲ್ ಕ್ಷತ್ರೀಯ. 2015ರಿಂದ ಬೇರೆ-ಬೇರೆ ರಾಜ್ಯಗಳಿಗೆ ಭೇಟಿ ನೀಡಿ ಸಂಘಟನೆ ಮಾಡಿದೆವು. ಹರಿಯಾಣದಲ್ಲಿ ಕುರುಬ ಸಮುದಾಯಕ್ಕೆ ಎಸ್ಟಿ ಸರ್ಟಿಫಿಕೇಟ್ ನೀಡಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ ಎಸ್ಟಿಗೆ ಸೇರಿಸಬೇಕು ಎಂದು ಕೇಂದ್ರದ ಮೇಲೆ ಒತ್ತಡ ಹೇರುತ್ತಿದೆ ಎಂದರು.
ದೆಹಲಿಯಲ್ಲಿ ರಾಷ್ಟ್ರೀಯ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ತೆರೆಯಲು ನಿರ್ಧರಿಸಲಾಗಿದೆ. 5ನೇ ವರ್ಷದ ವಾರ್ಷಿಕೋತ್ಸದಂದು ಬೆಂಗಳೂರಿನಲ್ಲಿ ವರ್ಚ್ಯುವಲ್ ಸಮಾವೇಶ ನಡೆಯಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಕೆ ಎಸ್ ಈಶ್ವರಪ್ಪ, ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್ ಮತ್ತಿತರ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.