ಬಳ್ಳಾರಿ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣಾ ನಿಮಿತ್ತ ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆಯೇನೂ ಆರಂಭವಾಗಿಲ್ಲ. ಆದರೂ ಜಿಲ್ಲಾಡಳಿತ ಮಾತ್ರ ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಸಕಲ ತಯಾರಿ ನಡೆಸಿಕೊಂಡಿದೆ.
ಈಗಾಗಲೇ ವಿವಿಧ ಸರ್ಕಾರಿ ಇಲಾಖೆಗಳ ನೌಕರರು ಹಾಗೂ ಅಧಿಕಾರಗಳ ವರ್ಗ ಒಳಗೊಂಡಂತೆ ನಾನಾ ಸಮಿತಿಗಳನ್ನು ರಚನೆ ಮಾಡಲಾಗಿದ್ದು, ಚುನಾವಣಾ ಕರ್ತವ್ಯಕ್ಕೆ ಹಾಜರಾಗಲು ಕೆಲ ನೌಕರರನ್ನ ನೇಮಿಸಲಾಗಿದೆ. ಆದರೆ ಚುನಾವಣಾ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಲು ಕೆಲವರು ಮುಂದಾಗಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಕೆಲ ನೌಕರರು ನಕಲಿ ಪ್ರಮಾಣ ಪತ್ರ ಸಲ್ಲಿಸಿರುವುದು ಗಮನಕ್ಕೆ ಬಂದಿತ್ತು. ಹಾಗಾಗಿ ಅದರ ಪೂರ್ವಾಪರ ಪರಿಶೀಲನೆಗೆ ಜಿಲ್ಲಾಡಳಿತವು ವಿಶಿಷ್ಠ ಆಲೋಚನೆಗೆ ಮುಂದಾಗಿದ್ದು, 1951ರ ಪ್ರಜಾ ಪ್ರತಿನಿಧಿ (ಆರ್ಪಿ) ಕಾಯ್ದೆ ಅಧಿನಿಯಮದಡಿ ನಕಲಿ ಪ್ರಮಾಣಪತ್ರ ಸಲ್ಲಿಸುವ ನೌಕರರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಿದೆ.
ನಕಲಿ ಪ್ರಮಾಣ ಪತ್ರ ಪತ್ತೆ:
ಇಲ್ಲಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ವಿವಿಧ ಇಲಾಖೆಗಳ ನೌಕರರ ವೈದ್ಯಕೀಯ ಪ್ರಮಾಣಪತ್ರ ಪರಿಶೀಲನೆ ಕಾರ್ಯ ನಡೆದಿದೆ. ತಲೆನೋವು ಸೇರಿದಂತೆ ಇನ್ನಿತರೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಇರೋದರ ಕುರಿತು ಪ್ರಮಾಣ ಪತ್ರ ಸಲ್ಲಿಸಿರುವುದು ಪರಿಶೀಲನೆ ವೇಳೆ ಕಂಡು ಬಂದಿದೆ. ಅವರ ಆರೋಗ್ಯ ತಪಾಸಣೆಯನ್ನು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎನ್.ಬಸರೆಡ್ಡಿ ಮಾಡಲಿದ್ದಾರೆ.
ಈ ಕುರಿತು ಮಾತನಾಡಿದ ಡಾ. ಬಸರೆಡ್ಡಿ, ಕಳೆದ ಬಾರಿಯ ಚುನಾವಣೆಯಲ್ಲಿ ಈ ರೀತಿಯ ನಕಲು ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಿರೋದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಹೀಗಾಗಿ ಈ ಬಾರಿ ಜಿಲ್ಲಾಡಳಿತವೇ ಈ ನಿರ್ಧಾರಕ್ಕೆ ಬಂದಿದೆ. ಕಳೆದ ಮೂರು ದಿನಗಳಿಂದ ಸರಿಸುಮಾರು ನೂರಕ್ಕೂ ಹೆಚ್ಚು ನೌಕರರು ಪ್ರಮಾಣ ಪತ್ರದೊಂದಿಗೆ ಬಂದಿದ್ದು, ಸಣ್ಣಪುಟ್ಟ ಮೂರ್ನಾಲ್ಕು ಪ್ರಕರಣಗಳು ಮಾತ್ರ ಬೆಳಕಿಗೆ ಬಂದಿವೆ. ಅವರಿಗೆ ಚುನಾವಣಾ ಕರ್ತವ್ಯದಿಂದ ನುಣಚಿಕೊಳ್ಳದಂತೆ ಎಚ್ಚರಿಕೆ ನೀಡಲಾಗಿದೆ ಎಂದರು.