ಬಳ್ಳಾರಿ : ವಿವಿಯಲ್ಲಿ ಸಮಾಜಕಲ್ಯಾಣ ಇಲಾಖೆಯಿಂದ ವಾರ್ಡನ್ ನೇಮಕ ಮಾಡಬೇಕು ಹಾಗೇ ಗುಣಮಟ್ಟ ಆಹಾರ ನೀಡಬೇಕೆಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಶೋಧನಾ ವಿದ್ಯಾರ್ಥಿಗಳು ಹಾಸ್ಟೆಲ್ ಗೆ ಬೀಗಹಾಕಿ ಪ್ರತಿಭಟನೆ ಮಾಡಿದರು.
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿರುವ ಎಸ್ಸಿ-ಎಸ್ಟಿ ಸಂಶೋಧನಾ ವಿದ್ಯಾರ್ಥಿಗಳ ಹಾಸ್ಟೆಲ್ ಗಳಿಗೆ ಬೀಗ ಹಾಕಿ ಅಗತ್ಯ ಮೂಲಸೌಲಭ್ಯ ನೀಡಬೇಕೆಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಈ ಹಿಂದೆ ಇದ್ದ ಸಮಾಜ ಕಲ್ಯಾಣ ಇಲಾಖೆ ವಾರ್ಡನ್ ನೇಮಕ ಮಾಡಬೇಕು. ಅದರಿಂದ ಅವರು ವಸತಿ ಮತ್ತು ಊಟಕ್ಕೆ ಸಂಭವಿಸಿದ ಕೆಲಸ ಮಾಡುತ್ತಾರೆ. ಆದರೆ, ವಿವಿಯ ಇನ್ನಿತರ ಅಧಿಕಾರಿಗಳಿಗೆ ವಹಿಸಿದರೇ ಅವರು ತಮ್ಮ ಕೆಲಸದ ಜೊತೆಗೆ ಈ ವಾರ್ಡನ್ ಕೆಲಸ ಮಾಡುವುದು ಕಷ್ಟಕರ ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಶೋಧನಾ ವಿದ್ಯಾರ್ಥಿಗಳು, ಎಂ.ಎ ವಿದ್ಯಾರ್ಥಿಗಳಿಗೆ ಒಟ್ಟು 44 ರೂಮ್ ಇವೆ. ಅದರಲ್ಲಿ 308 ವಿದ್ಯಾರ್ಥಿಗಳು ಇರುವುದಾದ್ರೂ ಹೇಗೆ ಎಂದು ಪ್ರಶ್ನಿಸಿದರು. 308 ವಿದ್ಯಾರ್ಥಿಗಳಿಗೆ 12 ಶೌಚಾಲಯ, 12 ಸ್ನಾನದ ಕೊಠಡಿಗಳಿವೆ. ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಹೇಳಿದರು.
ಅಡುಗೆ ಸಿಬ್ಬಂದಿ ಕೊರತೆ :
308 ವಿದ್ಯಾರ್ಥಿಗಳಿಗೆ ಅಡುಗೆ ಮಾಡಲು ಇಬ್ಬರು ಅಡುಗೆ ಭಟ್ಟರು, 7 ಸಹಾಯಕರಿದ್ದಾರೆ. ಅಡುಗೆ ತಯಾರು ಮಾಡುವಲ್ಲಿ ಕಷ್ಟವಾಗುತ್ತೆ. 308 ವಿದ್ಯಾರ್ಥಿಗಳಲ್ಲಿ, ಬರೀ 100 ತಟ್ಟೆಗಳಿವೆ ಎಂದು ಸಿಬ್ಬಂದಿ ಅಳಲು ತೋಡಿಕೊಂಡರು.
ಸಮಸ್ಯೆ ಬಗೆಹರಿಸುವ ಭರವಸೆ :
ಈ ವೇಳೆ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವಸಂತ ಕುಮಾರ್, ನಿಮ್ಮ ಸಮಸ್ಯೆಗಳನ್ನು ಕುಲಪತಿಗಳ ಮುಂದೆ ಇಡಲಾಗುವುದು. ಅವರ ತೀರ್ಮಾನ ನೀಡುತ್ತಾರೆ ಎಂದರು.