ಬಳ್ಳಾರಿ: ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿರುವ ಸಿರಗುಪ್ಪದ ಎಚ್.ಹೊಸಳ್ಳಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ನೇತೃತ್ವದ ಅಧಿಕಾರಿಗಳ ತಂಡ ಶನಿವಾರ ಭೇಟಿ ನೀಡಿ ಕಂಂಟೋನ್ಮೆಂಟ್ ವಲಯದ (ಅಘೋಷಿತ ವಲಯ) ಸ್ಥಿತಿಗತಿಗಳ ಪರಿಶೀಲನೆ ನಡೆಸಿತು.
ಕೊರೊನಾ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಎಚ್.ಹೊಸಳ್ಳಿ ಗ್ರಾಮವನ್ನು ಕಂಟೋನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. ಈ ಪ್ರದೇಶದ ಜನರಿಗೆ ಆಹಾರ ಹಾಗೂ ಮೂಲಸೌಕರ್ಯಗಳು ಸಮರ್ಪಕವಾಗಿ ವಿತರಣೆಯಾಗುತ್ತಿದೆಯೇ ಎಂಬುದನ್ನು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಪರಿಶೀಲಿಸಿದರು.

ಮನೆಮನೆಗೆ ಸಮೀಕ್ಷೆ ನಡೆಸುತ್ತಿರುವ ಆಶಾ, ಅಂಗನವಾಡಿ ಹಾಗೂ ಆರೋಗ್ಯ ಇಲಾಖೆ ಕಾರ್ಯಕರ್ತರಿಗೆ ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ಹಾಗೂ ಊಟ ಹಾಗೂ ಇನ್ನಿತರ ಸೌಕರ್ಯಗಳು ಸರಿಯಾಗಿ ಒದಗಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿದ ನಕುಲ್ ಅವರು, ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪ್ರಾಥಮಿಕ ಸಂಪರ್ಕ 20 ಮತ್ತು ದ್ವಿತೀಯ ಸಂಪರ್ಕ ಎಂದು ಗುರುತಿಸಲಾಗಿರುವ 27 ಜನರಿಗೆ ಗ್ರಾಮದಲ್ಲಿಯೇ ಏ.2ರಿಂದ ಕ್ವಾರಂಟೈನ್ ವಿಧಿಸಲಾಗಿದೆ. ಏ.30ರವರೆಗೆ ಕ್ವಾರಂಟೈನ್ನಲ್ಲಿ ಇರಲಿದ್ದಾರೆ. ಇವರಿಗೆ ನೀರು, ಊಟದ ವ್ಯವಸ್ಥೆಯನ್ನು ನಿಯಮಾನುಸಾರ ಒದಗಿಸುವಂತೆ ಡಿಸಿ ಸೂಚಿಸಿದರು.