ಚಿಕ್ಕೋಡಿ: ದೂಧಗಂಗಾ ನದಿ ಸುತ್ತುವರೆದ ಪರಿಣಾಮ ಬದನೆಕಾಯಿ ತೋಟದ ವಸತಿ ಜನರು ಪರದಾಡುವಂತಾಗಿದೆ. ಕಳೆದ ಐದು ದಿನಗಳಿಂದ ರಕ್ಷಣೆಗಾಗಿ 100ಕ್ಕೂ ಹೆಚ್ಚು ಕುಟುಂಬಗಳು ಅಂಗಲಾಚುತ್ತಿವೆ. ದೂಧಗಂಗಾ ನದಿಯಲ್ಲಿ ಮೊಸಳೆಗಳು ಇರುವುದರಿಂದ ಕುಟುಂಬಗಳು ಪ್ರಾಣ ಭೀತಿಯಲ್ಲಿವೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣ, ಬದನೆಕಾಯಿ ತೋಟದ ವಸತಿ, ಕಣಗಲೆ ತೋಟದ ವಸತಿ, ಪಟಾಣಖೋಡಿ ತೋಟದ ವಸತಿ ಪ್ರದೇಶದ ಜನರ ರಕ್ಷಣೆಗಾಗಿ ಹೆಲಿಕಾಪ್ಟರ್ ಕಳುಹಿಸುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದರು. ಆದರೆ, ಹೇಳಿ ಒಂದು ದಿನ ಕಳೆದರೂ ಹೆಲಿಕಾಪ್ಟರ್ ಬಂದಿಲ್ಲ.
ನದಿ ಮಧ್ಯೆ ಸಿಲುಕಿಹಾಕಿಕೊಂಡವರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ನಡುಗಡ್ಡೆ ಪ್ರದೇಶದಲ್ಲಿ ಸಿಲುಕಿದ ಮೂರು ಮಕ್ಕಳು ಅಸ್ವಸ್ಥರಾಗಿದ್ದಾರೆ. ಕ್ಷಣದಿಂದ ಕ್ಷಣಕ್ಕೆ ದೂಧಗಂಗಾ ನದಿ ನೀರು ಏರುತ್ತಿದೆ. ಹಾಗಾಗಿ ಏರ್ ಲಿಫ್ಟ್, ಹೆಲಿ ಲಿಫ್ಟ್ ಮಾಡಿ ಸ್ಥಳಾಂತರಕ್ಕೆ ಸಂತ್ರಸ್ತರ ಆಗ್ರಹಿಸುತ್ತಿದ್ದರು. ಜಿಲ್ಲಾಡಳಿತ ಮಾತ್ರ ಇತ್ತ ಬಂದಿಲ್ಲ. ಹಾಗಾಗಿ ಸಂತ್ರಸ್ತರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರಕೃತಿ ವಿಕೋಪಕ್ಕೆ ಜನಜೀವನ ಅಸ್ತವ್ಯಸ್ಥ:
ಮಹಾರಾಷ್ಟ್ರದ ಕೋಂಕಣ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮತ್ತು ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹಾಗಾಗಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ 14ಕ್ಕೂ ಹೆಚ್ಚು ನದಿ ತಟದ ಹಳ್ಳಿಗಳು ಜಲಾವೃತಗೊಂಡಿವೆ. ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಡಲಾಗಿದ್ದು, ಪ್ರತಿ ಗಂಟೆಗೆ ನೀರಿನ ಪ್ರಮಾಣ ಹೆಚ್ಚುತ್ತಿದೆ.
ಪ್ರಕೃತಿ ವಿಕೋಪಕ್ಕೆ ಒಳಗಾದ ಸಂತ್ರಸ್ತರಿಗೆ ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಸಮಾಜ ಕಲ್ಯಾಣ ಅಧಿಕಾರಿ ಬಿ ಎಸ್ ಯಾದವಾಡ ತಿಳಿಸಿದ್ದಾರೆ.
ಇನ್ನೂ ಅಥಣಿ ತಾಲೂಕಿನ ಝೀರೊ ಪಾಂಯಿಂಟ್ನಲ್ಲಿರುವ ಪದ್ಮಾವತಿ ಖಾಸಗಿ ಶಿಕ್ಷಣ ಸಂಸ್ಥೆಯವರು ನಿರಾಶ್ರಿತ ಸಂತ್ರಸ್ತರಿಗೆ ತಮ್ಮ ಶಿಕ್ಷಣ ಸಂಸ್ಥೆಯ ಕಟ್ಟಡದಲ್ಲಿರುವ 50 ಕೋಣೆಗಳಲ್ಲಿ ಗಂಜಿ ಕೇಂದ್ರ ತೆಗೆಯಲು ಅವಕಾಶ ಮಾಡಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮಹಾರಾಷ್ಟ್ರದಲ್ಲಿ ಕನ್ನಡ ಪ್ರಯಾಣಿಕರು ಸುರಕ್ಷಿತ:
ಕಳೆದ ಎರಡು ಮೂರು ದಿನಗಳಿಂದ ಭೂ ಕುಸಿತ, ಸೇತುವೆ ಮುಳುಗಡೆಯಿಂದ ರಾಷ್ಟ್ರೀಯ ಹೆದ್ದಾರಿ 4 ಬಂದ್ ಆಗಿದ್ದರಿಂದ ಪುಣೆ -ಬೆಂಗಳೂರು ಸಂಪರ್ಕ ಸಂಚಾರ ಕಡಿತವಾಗಿದೆ. ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಕರಾಡ ತಾಲೂಕು ಬಸ್ ಡಿಪೋದಲ್ಲಿ ನಮ್ಮ ಕನ್ನಡಿಗರಿಗೆ ಯಾವುದೇ ತೊಂದರೆ ಆಗದಂತೆ ಅಲ್ಲಿನ ಜನ ಸಹಕಾರ ನೀಡಿರುವುದನ್ನು ನಮ್ಮ ಕನ್ನಡಿಗರು ಈಟಿವಿ ಭಾರತ ಜೊತೆಗೆ ತಮ್ಮ ಮಾತನ್ನು ಹಂಚಿಕೊಂಡಿದ್ದಾರೆ.
ನಮ್ಮ ಕರ್ನಾಟಕದ ಜನತೆ ಹಾಗೂ ಕೆಎಸ್ಆರ್ಟಿಸಿ ಬಸ್ ಸಿಬ್ಬಂದಿ ಹಾಗೂ ಪ್ರಯಾಣಿಕರು ಮಹಾರಾಷ್ಟ್ರದಲ್ಲಿ ಉಳಿದಿದ್ದು, ಅವರಿಗೆ ಮಹಾ ಜನತೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದಾರೆ. ಬೆಳಗಾವಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಗಾಂಧಿನಗರದ 10ಕ್ಕೂ ಅಧಿಕ ಮನೆಗಳು ಧರೆಗುರಳಿದ ಪರಿಣಾಮ ಜನರ ಬದುಕು ಬೀದಿಗೆ ಬಂದಿದೆ. ರಕ್ಷಣಾ ಕೇಂದ್ರದಲ್ಲಿ ಜನರಿಗೆ ಪುನರ್ವಸತಿ ಕಲ್ಪಿಸಲಾಗಿದೆ.