ಚಿಕ್ಕೋಡಿ : ಇಲ್ಲಿನ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆದರೂ ಅಧ್ಯಕ್ಷ ಸ್ಥಾನಕ್ಕಾಗಿ ಪುರಸಭೆ ಸದಸ್ಯೆಯನ್ನು ಕಿಡ್ನ್ಯಾಪ್ ಮಾಡಿದ್ದಾರೆ ಎನ್ನವ ಆರೋಪ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಕೇಳಿಬಂದಿದೆ. ಈ ಕುರಿತಂತೆ ಯೋಧನೊಬ್ಬ ವಿಡಿಯೋ ಮಾಡಿ ತನ್ನ ಅಳಲು ತೋಡಿಕೊಂಡಿದ್ದಾನೆ.
ಮುಗಳಖೋಡ ಪುರಸಭಾ ಸದಸ್ಯೆ ಬಾಗವ್ವ ಶೇಗುಣಸಿಯನ್ನು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಶಿವಾನಂದ ಗೋಕಾಕ್ ಅಪಹರಿಸಿದ್ದಾರೆ ಎಂದು ಬಾಗವ್ವ ಕುಟುಂಬಸ್ಥರು ಆರೋಪ ಮಾಡಿದ್ದು, ತಾಯಿ ಎಲ್ಲಿದ್ದಾರೆ ಹೇಳಿ ಎಂದು ಶಿವಾನಂದ ಗೋಕಾಕ್ ಮನೆ ಎದುರು ಆಕೆಯ ಕುಟುಂಬದ ಸದಸ್ಯರು ಧರಣಿ ನಡೆಸುತ್ತಿದ್ದಾರೆ. ಸದ್ಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾಗವ್ವ ಅವರ ಮೈದುನನ ಮಗ ಮಾರುತಿ ಪುಂಡಲಿಕ ಶೇಗುಣಸಿ, ನನ್ನ ತಾಯಿಗೆ ಅನ್ಯಾಯವಾಗುತ್ತಿದೆ, ನಮ್ಮಗೆ ನ್ಯಾಯ ಒದಗಿಸಿ ಕೊಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿ ಬಿಟ್ಟಿದ್ದಾರೆ.
ನಮ್ಮ ದೊಡ್ಡಮ್ಮಳಾದ ಬಾಗವ್ವ ಶೇಗುಣಸಿ ಅವರನ್ನು ಶಿವಾನಂದ ಗೋಕಾಕ್ ಎಂಬಾತರು ಮೂರುವರೆ ತಿಂಗಳಿನಿಂದ ರಾಜಕೀಯ ಕುತಂತ್ರದಿಂದ ಅಪಹರಿಸಿದ್ದಾರೆ. ನಮ್ಮ ಮನೆಯವರು ಹಾರೂಗೇರಿ ಪೊಲೀಸ್ ಠಾಣೆಗೆ ಎರಡು ಬಾರಿ ಹೋಗಿ ಬಂದರೂ ಏನೂ ಸ್ಪಂದನೆ ಸಿಕ್ಕಿಲ್ಲ. ಬೆಳಗಾವಿ ಎಸ್ಪಿ ಕಚೇರಿಗೆ ಹೋದರೂ ಅಲ್ಲೂ ಕೂಡ ಸ್ಪಂದನೆ ಸಿಗಲಿಲ್ಲ. ಬಾಗವ್ವ ಜೀವಂತವಾಗಿದ್ದಾರಾ?, ಸತ್ತಿದ್ದಾರಾ? ಎಂದು ತಿಳಿಯುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಇನ್ನು ಈ ವಿಡಿಯೋದಲ್ಲಿ ನಾನೊಬ್ಬ ಭಾರತೀಯ ಯೋಧ. ಗಡಿಯಲ್ಲಿ ನಿಂತು ದೇಶ ಸೇವೆ ಮಾಡಬೇಕಾ?, ಮನೆ ಕಡೆ ಯೋಚನೆ ಮಾಡಬೇಕಾ?, ಈ ಅನ್ಯಾಯವನ್ನು ತಡೆಯುವವರು ಯಾರು ಇಲ್ಲವೇ? ನಾವು ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದೇವೆ, ಈಗ ನಮ್ಮ ಮನೆಯವರೂ ಕಷ್ಟ ಅನುಭವಿಸುತ್ತಿದ್ದಾರೆ ಎಂದು ತಮ್ಮ ನೋವನನ್ನು ವಿಡಿಯೋ ಮೂಲಕ ವ್ಯಕ್ತಪಡಿಸಿ ನೆರವಿಗಾಗಿ ಮೊರೆಯಿಟ್ಟಿದ್ದಾರೆ.