ಗೋಕಾಕ್ : ನನ್ನ ರಾಜಕೀಯ ಜೀವನ ಆರಂಭವಾಗಿದ್ದೇ ಗೋಕಾಕ್ ಮತಕ್ಷೇತ್ರದಿಂದ. ಹೀಗಾಗಿ, ಗೋಕಾಕ್ ಜನರೇ ನನ್ನ ರಾಜಕೀಯ ಏಳ್ಗೆಗೆ ಪ್ರಮುಖ ಕಾರಣ ಎಂದು ಬೆಳಗಾವಿ ಬೈ ಎಲೆಕ್ಷನ್ನ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹೇಳಿದರು.
ಗೋಕಾಕ್ ವಿಧಾನಸಭಾ ಮತಕ್ಷೇತ್ರದ ಮಮದಾಪುರ ಗ್ರಾಮದಲ್ಲಿ ಶುಕ್ರವಾರ ಬೆಳಗಾವಿ ಲೋಕಸಭಾ ಉಪಚುನಾವಣೆಯ ಪ್ರಚಾರ ನಡೆಸಿ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ನಾನು ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ.
ನಮ್ಮ ರಾಜಕೀಯ ಜೀವನ ಆರಂಭವಾಗಿದ್ದೇ ಗೋಕಾಕ್ನಿಂದ. ಮಮದಾಪುರ ಗ್ರಾಮದ ಮುಖಂಡರು ಹಾಗೂ ಈ ಭಾಗದ ಅನೇಕರು ಸೇರಿ ಅಂದು ಸಂಘಟನೆ ಆರಂಭಿಸಿದ್ದೆವು. ಈಗಲೂ ನಾವು ಒಗ್ಗಟ್ಟಾಗಿದ್ದೇವೆ. ನೀವೆಲ್ಲರೂ ನಮ್ಮ ಗೆಲುವಿಗೆ ಕೈಜೋಡಿಸಲಿದ್ದೀರಿ ಎಂಬ ನಂಬಿಕೆ ಇದೆ ಎಂದರು.
ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮತದಾರರು ಒಂದು ಬಾರಿ ಅವಕಾಶ ಮಾಡಿ ಕೊಡಬೇಕು. ಗೋಕಾಕ್ ಮತಕ್ಷೇತ್ರದಲ್ಲಿ ಯಾವ ರೀತಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕೆಂಬ ಆಲೋಚನೆಗಳು ನಮ್ಮಲ್ಲಿವೆ. ತಾವು ಅವಕಾಶ ಮಾಡಿಕೊಟ್ಟರೇ ನಮ್ಮ ಕಾರ್ಯವೈಖರಿ ನಿಮಗೆ ಗೊತ್ತಾಗಲಿದೆ ಎಂದು ತಿಳಿಸಿದರು.