ಬೆಳಗಾವಿ: ನಗರದ ಹೊರವಲಯದಲ್ಲಿರುವ ಗೌಂಡವಾಡ ಗ್ರಾಮದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದ್ದ ಸತೀಶ್ ಪಾಟೀಲ್ ಕಗ್ಗೊಲೆ ವಿಷಯವನ್ನು ಕುಟುಂಬಸ್ಥರಿಗೆ ಇಂದು ಬೆಳಗ್ಗೆ ತಿಳಿಸಲಾಯಿತು. ಹೀಗಾಗಿ ಸತೀಶ್ ಪಾಟೀಲ್ ನಿವಾಸದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗಂಡನ ಸಾವಿನ ಸುದ್ದಿ ತಿಳಿದು ಪತ್ನಿ ಸ್ನೇಹಾ ನರಳಾಡಿದರು.
ಸತೀಶ್ ಪಾಟೀಲ್ ಧರಿಸುತ್ತಿದ್ದ ಚಪ್ಪಲಿ, ಬೈಕ್ ಹಿಡಿದು ಸ್ನೇಹಾ ಕಣ್ಣೀರಾದರು. ಗ್ರಾಮಸ್ಥರು ಸಂತೈಸಿದರು. ಗ್ರಾಮವಿನ್ನೂ ಬೂದಿಮುಚ್ಚಿದ ಕೆಂಡದಂತಾಗಿದ್ದು, ನೂರಕ್ಕೂ ಅಧಿಕ ಪೊಲೀಸರು ಠಿಕಾಣಿ ಹೂಡಿದ್ದಾರೆ.
ಗಲಾಟೆಗೆ ಕಾರಣವೇನು?: ಇನ್ನೋವಾ ಕಾರು ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದೆ. ಗೌಂಡವಾಡ ಗ್ರಾಮದಲ್ಲಿ ದೇವಸ್ಥಾನದ ಜಾಗದ ವಿಚಾರಕ್ಕೆ ಎರಡು ಬಣಗಳ ಮಧ್ಯೆ ವೈಷಮ್ಯ ಇತ್ತು. ದೇವಸ್ಥಾನ ಜಮೀನು ದೇಗುಲಕ್ಕೆ ಮರಳಿ ಸಿಗಬೇಕು ಎಂದು ಸತೀಶ್ ಪಾಟೀಲ್ ಹೋರಾಟ ಮಾಡುತ್ತಿದ್ದರು. ಸತೀಶ್ ಪಾಟೀಲ್ ಹಾಗೂ ಆನಂದ ಕುಟ್ರೆ, ನಿಲಜಕರ್ ಕುಟುಂಬ ಮಧ್ಯೆ ವೈಷಮ್ಯ ಇತ್ತು.
ಇಂದು ಕಾಲಬೈರವ ದೇವಸ್ಥಾನದಲ್ಲಿ ಪೂಜೆ ಇಟ್ಟುಕೊಳ್ಳಲಾಗಿದೆ. ಈ ವೇಳೆ ಕೆಲ ಗ್ರಾಮಸ್ಥರು ದೇವಸ್ಥಾನ ಶುಚಿಗೊಳಿಸುತ್ತಿದ್ದರು. ದೇವಸ್ಥಾನದ ಎದುರು ಆನಂದ ಇನ್ನೋವಾ ಕಾರು ಪಾರ್ಕ್ ಮಾಡಿದ್ದು, ಆನಂದ ಕುಟ್ರೆ ಹಾಗೂ ಸತೀಶ್ ಪಾಟೀಲ್ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿದೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಇರಿದು ಸತೀಶ್ ಪಾಟೀಲ್ ಹತ್ಯೆ ಮಾಡಲಾಗಿದೆ.
ಸತೀಶ್ ಪಾಟೀಲ್ ಕೊಲೆಯಾದ ಸುದ್ದಿ ಕೇಳಿ ಗ್ರಾಮದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಆರೋಪಿಗಳ ಮನೆ ಮೇಲೆ ಕಲ್ಲು ತೂರಾಟ, ಮನೆ ಎದುರು ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಬಳಿಕ ಗ್ರಾಮದೆಲ್ಲೆಡೆ ಮನೆ ಮುಂದೆ ನಿಲ್ಲಿಸಲಾಗಿದ್ದ ವಾಹನಗಳಿಗೆ ಉದ್ರಿಕ್ತರು ಬೆಂಕಿ ಹಚ್ಚಿದರು. ವಾಹನಗಳಷ್ಟೇ ಅಲ್ಲ, ಬಣವೆಗಳಿಗೂ ಬೆಂಕಿ ಹಚ್ಚಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಭುಗಿಲೆದ್ದ ಹಿಂಸಾಚಾರ: ಓರ್ವನ ಕೊಲೆ, ಹತ್ತಾರು ವಾಹನಗಳಿಗೆ ಬೆಂಕಿ