ಅಥಣಿ: 'ಮರದಿಂದ ಕೆಳಬಿದ್ದ ಹೂ ಮತ್ತೆ ಅರಳುವುದಿಲ್ಲ. ಬೇರುಗಳು ಗಟ್ಟಿಯಾಗಿದ್ದರೆ ಮತ್ತೆ ಹೊಸ ಹೂಗಳು ಹುಟ್ಟುತ್ತವೆ' ಎಂದು ಫೇಸ್ ಬುಕ್ನಲ್ಲಿ ಪೋಸ್ಟ್ ಹಾಕಿರುವ ಸಚಿವ ಸ್ಥಾನ ವಂಚಿತ ಶಾಸಕ ಮಹೇಶ ಕುಮಟಳ್ಳಿ ಅಸಾಮಾಧಾನ ಹೊರಹಾಕಿದ್ದಾರೆ.
ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಕ್ಕೇ ಸಿಗುತ್ತೆ ಎಂಬ ವಿಶ್ವಾಸದಲ್ಲಿದ್ದ ಕುಮಟಳ್ಳಿಗೆ ಬಿಜೆಪಿ ಹೈಕಮಾಂಡ್ ಆಘಾತ ನೀಡಿದೆ. ಉಪಚುನಾವಣೆಯಲ್ಲಿ ಗೆದ್ದ 11 ಶಾಸಕರಲ್ಲಿ 10 ಶಾಸಕರಿಗೆ ಮಂತ್ರಿ ಸ್ಥಾನ ನೀಡಲಾಗಿದ್ದು, ಸಚಿವರಾಗುವ ಕುಮಟಳ್ಳಿ ಆಸೆ ಈಡೇರಿಲ್ಲ.
ಇದರಿಂದ ತಮ್ಮ ಬೇಸರವನ್ನು ಅವರು ಫೇಸ್ಬುಕ್ನಲ್ಲಿ ಹೊರ ಹಾಕಿದ್ದಾರೆ. ಜೀವನದಲ್ಲಿ ಈವರೆಗೆ ಕಳೆದುಕೊಂಡಿದ್ದಕ್ಕಿಂತಲೂ, ನಮ್ಮ ಗುರಿ ಮುಟ್ಟಬೇಕಿರುವುದು ಮುಖ್ಯ. ಆತ್ಮವಿಶ್ವಾಸ, ನಂಬಿಕೆ, ಧೈರ್ಯ ನಮ್ಮ ಪ್ರಬಲ ಅಸ್ತ್ರಗಳು ಎಂದು ಬರೆದುಕೊಳ್ಳುವ ಮೂಲಕ ಭವಿಷ್ಯದಲ್ಲಿ ಮಂತ್ರಿ ಸ್ಥಾನ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.