ಬೆಳಗಾವಿ: ನಮ್ಮ ದೇಶದ ಅದೆಷ್ಟೋ ಕುಟುಂಬಗಳಿಗೆ ಪ್ರತಿನಿತ್ಯದ ಆಧಾರ ಸ್ತಂಭವಾಗಿರುವ ಹೈನುಗಾರಿಕೆ ಉದ್ಯಮಕ್ಕೆ ಈಗ ಒಂದು ಕಂಟಕ ಎದುರಾಗಿದೆ. ಪೌಷ್ಟಿಕಾಂಶ ಹೊಂದಿದ ಹಾಲನ್ನು ದೇಶದ ಜನರಿಗೆ ನೀಡುತ್ತಿರುವ ರೈತ ವರ್ಗ ಈಗ ಬೀದಿಗೆ ಬಂದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ರೈತರ ಹಿತ ಕಾಪಾಡುವಂತೆ ಸರ್ಕಾರದ ಮುಂದೆ ಕೈಚಾಚುವಂತಾಗಿದೆ ಇವರ ಬಾಳು.
ಇಂದು ಬೆಳಗಾವಿಯಲ್ಲಿ ಹೈನುಗಾರಿಕೆ ನಡೆಸುವ ಸಾವಿರಾರು ರೈತರು ಬೀದಿಗೆ ಬಂದಿದ್ದರು. ಸ್ವತಃ ತಮ್ಮ ಎಮ್ಮೆಗಳನ್ನು ರಸ್ತೆಗೆ ಇಳಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೇಂದ್ರ ಸರ್ಕಾರ ಮಾಡಲು ಹೊರಟಿರುವ ಆ ಒಂದು ಕೆಟ್ಟ ನಿರ್ಧಾರಕ್ಕೆ ಇಡೀ ರೈತ ಸಮೂಹ ತಿರುಗಿ ಬಿದ್ದಿದೆ. ಸಮಗ್ರ ಆರ್ಥಿಕ ಸಹಭಾಗಿತ್ವದಲ್ಲಿ ವಿದೇಶದಿಂದ ಹೈನುಗಾರಿಕೆ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದು. ಇದರಿಂದ ಕೇಂದ್ರಕ್ಕೆ ಯಾವ ಲಾಭವೋ ಗೊತ್ತಿಲ್ಲ. ಆದರೆ, ರಾಜ್ಯದಲ್ಲಿ ಹೈನುಗಾರಿಕೆ ಮಾಡುವವರಿಗೆ ದೊಡ್ಡ ಹೊಡೆತ ಬೀಳಲಿದೆ ಎಂಬುದು ರೈತ ಹೋರಾಟಗಾರರ ವಾದ.
ಕೇಂದ್ರ ಸರ್ಕಾರ ತೆರಿಗೆ ರಹಿತ ಕ್ಷೀರ ಉತ್ಪನ್ನ ಆಮದು ಮಾಡುಕೊಳ್ಳುವ ಚಿಂತನೆ ನಡೆಸಿದೆ. ಈ ಒಪ್ಪಂದ ಜೊತೆ ವಿದೇಶಿ ಆರ್ಥಿಕ ನೀತಿ ಒಪ್ಪಂದ ತಡೆಯುವಂತೆ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಪ್ರತಿಭಟನೆ ಹಮ್ಮಿಕೊಂಡಿತ್ತು. ಕೇಂದ್ರದ ಈ ನಿರ್ಧಾರದಿಂದ ದೇಶದಲ್ಲಿ ಸ್ವದೇಶಿ ಹೈನುಗಾರಿಕೆಗೆ ದೊಡ್ಡ ಪೆಟ್ಟು ಬೀಳುವುದರ ಜೊತೆಗೆ ಹೈನುಗಾರಿಕೆ ನಂಬಿ ಜೀವನ ನಡೆಸುವ ರೈತ ಸಮುದಾಯ ಬೀದಿಗೆ ಬರುತ್ತದೆ ಎಂದು ರೈತರು ಆಕ್ರೋಶ ಹೊರ ಹಾಕಿದರು.
ಪ್ರತಿಭಟನೆ ಕಾವು ಎಷ್ಟಾಗಿತ್ತು ಎಂದರೆ ಜಿಲ್ಲೆಯ ನಾನಾ ಭಾಗಗಳಿಂದ ಬಂದ ರೈತರು ತಮ್ಮ ಆಕ್ರೋಶ ಹೊರ ಹಾಕಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಜೊತೆಗೆ ನಡು ರಸ್ತೆಯಲ್ಲಿ ಎಮ್ಮೆಯ ಹಾಲು ಕರೆದು ಪುನಾ ಎಮ್ಮೆಯ ಮೇಲೆ ಹಾಲು ಚೆಲ್ಲುವ ಮುಖಾಂತರ ಕೇಂದ್ರ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರೆಯಬೇಕು ಎಂಬ ಆಗ್ರಹ ವ್ಯಕ್ತಪಡಿಸಿದರು.
ಅಷ್ಟೇ ಅಲ್ಲ ಕೇಂದ್ರ ಸರ್ಕಾರ ಮಾಡ ಹೊರಟಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದಲ್ಲಿ ವಿದೇಶದಿಂದ ಹೈನುಗಾರಿಕೆ ಉತ್ಪನ್ನ ಆಮದು ಪ್ರಕ್ರಿಯೆಯನ್ನು ಮೊನ್ನೆ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ವಿರೋಧ ವ್ಯಕ್ತಪಡಿಸಿ, ಕೇಂದ್ರ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸಿದರು.