ಬೆಳಗಾವಿ: ಯಾವುದೋ ಕಾರಣಕ್ಕೆ ಸಹೋದರರ ಮಧ್ಯೆ ನಡೆದ ಗಲಾಟೆಯಲ್ಲಿ ಒಡಹುಟ್ಟಿದ ತಮ್ಮನನ್ನೇ ಚಾಕುವಿನಿಂದ ಇರಿದು ಅಣ್ಣ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ನಡೆದಿದೆ. ಗೋಕಾಕ್ ನಗರದ ನಿವಾಸಿ ಮುನಾಫ್ ದೇಸಾಯಿ (24) ಕೊಲೆಗೀಡಾದ ಸಹೋದರ. ರಮಜಾನ್ ದೇಸಾಯಿ(26) ಕೊಲೆ ಮಾಡಿದ ಆರೋಪಿ.
ಮುನಾಫ್ ದೇಸಾಯಿ ತನ್ನ ತಂದೆ- ತಾಯಿಯೊಂದಿಗೆ ಯಾವುದೋ ಕಾರಣಕ್ಕೆ ಗಲಾಟೆ ಮಾಡುತ್ತಿದ್ದನಂತೆ. ಈ ವೇಳೆ ಮಧ್ಯಪ್ರವೇಶಿಸಿದ ಆತನ ಸಹೋದರ ರಮಜಾನ್ ತಂದೆ-ತಾಯಿ ಜೊತೆ ಯಾಕೆ ಕಿತ್ತಾಡುತ್ತೀಯಾ ಎಂದು ಪ್ರಶ್ನೆ ಮಾಡಿದ್ದಾನೆ. ಇದರಿಂದ ಸಹೋದರರ ಮಧ್ಯೆ ವಾಗ್ವಾದ ಉಂಟಾಗಿದೆ. ಗಲಾಟೆ ತಾರಕಕ್ಕೇರಿ ಮನೆಯಲ್ಲಿದ್ದ ಚಾಕುವಿನಿಂದ ಅಣ್ಣ ರಮಜಾನ್ನು ತಮ್ಮ ಮುನಾಫ್ ಹೊಟ್ಟೆಗೆ ಇರಿದಿದ್ದಾನೆ.
ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಮುನಾಫ್ನನ್ನು ಪೋಷಕರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮುನಾಫ್ ಸಾವನ್ನಪ್ಪಿದ್ದಾನೆ. ತಮ್ಮನ ಹೊಟ್ಟೆಗೆ ಚಾಕು ಇರಿದ ಆರೋಪಿ ರಮಜಾನ್ನನ್ನು ಗೋಕಾಕ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಗೋಕಾಕ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಮಾನಸಿಕ, ದೈಹಿಕ ಕಿರುಕುಳ ಆರೋಪ.. ಬೆಂಗಳೂರಲ್ಲಿ ಹೆಡ್ ಕಾನ್ಸ್ಟೇಬಲ್ ವಿರುದ್ಧ ದೂರು ನೀಡಿದ ಪತ್ನಿ