ಹೈದರಾಬಾದ್: ತಮ್ಮ ಮಗಳು ವಿದೇಶಕ್ಕೆ ಹೋಗಿ ಎಂಬಿಎ ಕಲಿಯಲಿ ಎಂಬುದು ಪೋಷಕರ ಆಸೆಯಾಗಿತ್ತು. ಆದರೆ ಆ ಯುವತಿಯ ಕನಸೇ ಬೇರೆಯಾಗಿತ್ತು. ನೇರವಾಗಿ ವ್ಯಾಪಾರ ಕ್ಷೇತ್ರಕ್ಕಿಳಿದು ಅಲ್ಲಿಂದಲೇ ವ್ಯಾಪಾರದ ಒಳ-ಹೊರಗುಗಳನ್ನು ಕಲಿಯಲು ನಿರ್ಧರಿಸಿದ್ದರು. ಇದು ಅವರಿಗೆ ಬರೀ ನಿರ್ಧಾರವಾಗಿರಲಿಲ್ಲ.. ವಾಸ್ತವದಲ್ಲಿ ಅವರು ಹಾಗೆಯೇ ಮಾಡಿದರು. ಸಣ್ಣ ವಯಸ್ಸಿನಲ್ಲಿಯೇ ಹೋಟೆಲ್ ಕ್ಷೇತ್ರಕ್ಕೆ ಬಂದ ಯುವತಿ ಜಗತ್ತು ತಿರುಗಿ ನೋಡುವಂಥ ಸಾಧನೆ ಮಾಡಿದ್ದಾರೆ. ಇಂದು ಅವರ ಕಂಪನಿ 10 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ. ಅವರೇ ಯುವ ಉದ್ಯಮಿ ಮರೆಡ್ಡಿ ಹರಿಣಿ. ತಮ್ಮ ಯಶೋಗಾಥೆಯ ವಿವಿಧ ಮಜಲುಗಳನ್ನು 'ಈಟಿವಿ ಭಾರತ'ನೊಂದಿಗೆ ಅವರು ಹಂಚಿಕೊಂಡಿದ್ದಾರೆ.
ಮರೆಡ್ಡಿ ಹರಿಣಿ ಯಶೋಗಾಥೆ ಇಲ್ಲಿದೆ: ಆಂಧ್ರಪ್ರದೇಶದ ಗುಂಟೂರು ನನ್ನ ಕುಟುಂಬದ ಮೂಲ ಊರು. ನನ್ನ ತಂದೆ ಕೃಷ್ಣಾ ರೆಡ್ಡಿ ಚೆನ್ನೈ ಮತ್ತು ಗುಂಟೂರಿನಲ್ಲಿ ಎಲೆಕ್ಟ್ರಾನಿಕ್ಸ್ ಶೋ ರೂಂ ನಡೆಸುತ್ತಿದ್ದರು. ಪ್ರಾಥಮಿಕ ಶಿಕ್ಷಣದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹೊಸಪೇಟೆ ಮತ್ತು ಮೈಸೂರಿಗೆ ತೆರಳಿದ್ದೆ. ನನ್ನ ತಾಯಿ ಆಗ ಗೃಹಿಣಿಯಾಗಿದ್ದರು. ನನ್ನ ಕಿರಿಯ ಸಹೋದರ ಇನ್ನೂ ಓದುತ್ತಿದ್ದಾನೆ. ನನ್ನ ಬಾಲ್ಯದಿಂದಲೂ, ನನ್ನ ತಂದೆಯ ಸ್ಫೂರ್ತಿಯಿಂದ ನಾನು ಉದ್ಯಮಕ್ಕೆ ಪ್ರವೇಶಿಸಲು ಬಯಸಿದ್ದೆ. ನಾನು ಇಂಟರ್ನಲ್ಲಿ ಇಬಿಎಸಿ (ಅರ್ಥಶಾಸ್ತ್ರ, ಬ್ಯುಸಿನೆಸ್ ಸ್ಟಡೀಸ್, ಅಕೌಂಟೆನ್ಸಿ, ಕಂಪ್ಯೂಟರ್ ಸೈನ್ಸ್) ಮತ್ತು ಬಿಬಿಎಂ ಅನ್ನು ವೈಜಾಗ್ ಗೀತಂನಿಂದ ಪೂರ್ಣಗೊಳಿಸಿದೆ. ಅದೊಂದು ದಿನ ನಾನು ವ್ಯವಹಾರ ಕ್ಷೇತ್ರಕ್ಕೆ ಪ್ರವೇಶಿಸಲು ಬಯಸುತ್ತೇನೆ ಎಂದು ತಂದೆಗೆ ಹೇಳಿದೆ. ಆದರೆ ಅವರು ಮೊದಲು ಕೆನಡಾದಲ್ಲಿ ಎಂಬಿಎ ಮಾಡುವಂತೆ ಹೇಳಿದರು. ಆದರೆ ವಿದೇಶಕ್ಕೆ ಹೋದರೆ ಅಲ್ಲಿಂದ ವಾಪಸ್ ಬರಲು ಸಾಧ್ಯವೇ ಇಲ್ಲ ಅನ್ನಿಸಿತು. ಪಾಠಕ್ಕಿಂತ ಅನುಭವದ ಪಾಠದಿಂದ ಯಶಸ್ಸು ಸಾಧ್ಯ ಎಂದು ನಾನು ಬಲವಾಗಿ ನಂಬುತ್ತೇನೆ. ನನ್ನ ಶಿಕ್ಷಣಕ್ಕಾಗಿ ಉಳಿಸಿದ ಮೊತ್ತವನ್ನು ಹೂಡಿಕೆ ಮಾಡಿ ಉದ್ಯಮ ಪ್ರಾರಂಭಿಸುವುದಾಗಿ ತಂದೆಗೆ ಮನವರಿಕೆ ಮಾಡಿಕೊಟ್ಟೆ.
ಇಂಪಾಸಿಬಲ್ ಅಂದ್ರು.. ನಾ ಬಿಡಲಿಲ್ಲ: ಎಲೆಕ್ಟ್ರಾನಿಕ್ಸ್ ಮಾರ್ಕೆಟಿಂಗ್ ಎಂದರೆ ತಂತ್ರಜ್ಞಾನವನ್ನು ತಿಳಿದುಕೊಳ್ಳುವುದು. ಆದರೆ ಫ್ಯಾಷನ್ ಇಂಡಸ್ಟ್ರಿ ವ್ಯವಹಾರಕ್ಕೆ ಸುಲಭವಾಗಿದೆ ಎನ್ನುವುದು ಅಪ್ಪನ ಸಲಹೆಯಾಗಿತ್ತು. ಆದರೆ ನಾನು ಹೊಸ ತಿಂಡಿಗಳನ್ನು ತಯಾರಿಸಲು ಮತ್ತು ಬಡಿಸಲು ಇಷ್ಟಪಡುವಂಥವಳು. ರಜೆಯಲ್ಲಿ ಅಜ್ಜಿಯ ಊರಿಗೆ ಹೋದಾಗ ಹೊಸ ಹೊಸ ರೆಸಿಪಿಗಳನ್ನು ಕಲಿಯುತ್ತಿದ್ದೆ. ಹೀಗಾಗಿ ಇದೇ ಕ್ಷೇತ್ರ ನನಗೆ ಸರಿ ಅನ್ನಿಸಿತು. ಬಂಧು ಮಿತ್ರರು ‘ಹುಡುಗರಿಗೇ ಹೋಟೆಲ್ ಉದ್ಯಮ ಕಷ್ಟ.. ಅಂಥದ್ರಲ್ಲಿ ಹೆಣ್ಣುಮಕ್ಕಳಿಗೆ ಸಾಧ್ಯವೇ? ಎಂದು ಪ್ರಶ್ನಿಸಿದರು. ಆದರೆ ಕಲಿತರೆ ಯಾವುದೇ ಕ್ಷೇತ್ರವಾದರೂ ಅಷ್ಟೇ ಎಂದು ನನಗನ್ನಿಸುತ್ತದೆ. ಆರು ತಿಂಗಳ ಪ್ರಾಜೆಕ್ಟ್ ವರ್ಕ್ ಮಾಡಲು ಹೊಸಪೇಟೆಯ ಪ್ರಸಿದ್ಧ ಹೋಟೆಲ್ ನ ಎಂಡಿ ಯೊಬ್ಬರನ್ನು ಭೇಟಿ ಮಾಡಿದೆ. 40 ವರ್ಷಗಳ ಅನುಭವವಿದ್ದರೂ ಹೆಣ್ಣು ಮಕ್ಕಳಿಗೆ ಈ ಕ್ಷೇತ್ರ ಕಷ್ಟ ಎಂದರು. ಆದಾಗ್ಯೂ ನನ್ನ ಹಠ ನೋಡಿ ಕೊನೆಗೂ ಒಪ್ಪಿದರು. ‘ಅಸಾಧ್ಯ’ ಎಂಬ ಮಾತನ್ನು ಮತ್ತೆ ಮತ್ತೆ ಕೇಳಿದ ಮೇಲೆ ನನ್ನ ಸಾಮರ್ಥ್ಯ ಸಾಬೀತುಪಡಿಸಲೇಬೇಕೆಂಬ ಸಂಕಲ್ಪ ಮತ್ತಷ್ಟು ದೃಢವಾಯಿತು.
ಪರಿಪೂರ್ಣ ಆಂಧ್ರ ಶೈಲಿ: ಬೆಂಗಳೂರಿನಲ್ಲಿ ರೆಸ್ಟೋರೆಂಟ್ ಆರಂಭಿಸಲು ಬಯಸಿದಾಗ, ತಂದೆ ತಮ್ಮ ವ್ಯವಹಾರದ ಅನುಭವಗಳನ್ನು ವಿವರಿಸಿದರು. ಆಂಧ್ರ, ತಮಿಳುನಾಡು, ಕೇರಳ ಇತ್ಯಾದಿ ವಿಶೇಷ ರೆಸ್ಟೋರೆಂಟ್ಗಳು ಬೆಂಗಳೂರಿನಲ್ಲಿ ಪ್ರತಿ ಹೆಜ್ಜೆಯಲ್ಲೂ ಕಂಡುಬರುತ್ತವೆ. ಆದರೆ ಒಳಗೆ ಎಲ್ಲೆಡೆ ಒಂದೇ ರೀತಿಯ ಭಕ್ಷ್ಯಗಳನ್ನು ನೀಡಲಾಗುತ್ತದೆ. ನನ್ನ ರೆಸ್ಟೊರೆಂಟ್ ಹಾಗಾಗುವುದು ನನಗೆ ಇಷ್ಟವಿರಲಿಲ್ಲ. ಹೀಗಾಗಿ ನಾವು ಮನೆಯಲ್ಲಿ ಅಡುಗೆ ಮಾಡುವ ಆಂಧ್ರದ ಅತ್ಯುತ್ತಮ ಖಾದ್ಯಗಳ ಮೆನು ಸಿದ್ಧಪಡಿಸಿದ್ದೇವೆ. ಉಳವಚಾರು ಬಿರಿಯಾನಿ, ಗುಂಟೂರು ಗೊಂಗೂರ, ಅವಚಯ ಬಿರಿಯಾನಿ, ಪಲ್ನಾಡು ನಾಟುಕೋಡಿ ಬಿರಿಯಾನಿ ಈ ಮೆನುವಿನಲ್ಲಿವೆ. ವಿದ್ಯಾರ್ಥಿಗಳು ಮತ್ತು ಸಣ್ಣ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಅನ್ ಲಿಮಿಟೆಡ್ ಬಿರಿಯಾನಿ ಮತ್ತು ಕೆಲವು ಚಿಕನ್ ಸ್ಟಾರ್ಟರ್ಗಳನ್ನು ಕೇವಲ 299 ರೂ.ಗೆ ನೀಡಿದೆವು. ಈ ಕ್ರಮದಿಂದ ನಾವು ಪ್ರಖ್ಯಾತಿ ಪಡೆಯಲಾರಂಭಿಸಿದೆವು. ಇತರ ಹೋಟೆಲ್ಗಳು ಕೂಡ ನಮ್ಮಂತೆಯೇ ಮಾಡಲು ಆರಂಭಿಸಿದವು. ಖಾದ್ಯಗಳಿಗೆ ಮನೆಯಲ್ಲಿಯೇ ಮಸಾಲೆ ಪುಡಿಗಳನ್ನು ತಯಾರಿಸುವ ಮಾಡುವ ಮೂಲಕ ನಾವು ರುಚಿ ಮತ್ತು ಗುಣಮಟ್ಟದಲ್ಲಿ ಅನನ್ಯರಾಗಿದ್ದೇವೆ.
20 ಖಾದ್ಯ 349 ರೂಪಾಯಿಗೆ ನೀಡಿದ್ದು : ನೂರಾರು ಹೋಟೆಲ್ಗಳಿರುವ ಕಲ್ಯಾಣನಗರದಲ್ಲಿ ನಾವು ಕೇವಲ ಮೂರು ವರ್ಷದಲ್ಲಿ ವಾರ್ಷಿಕ ರೂ. 9 ಕೋಟಿ ರೂ. ವ್ಯವಹಾರ ನಡೆಸುತ್ತಿದ್ದೇವೆ. ಹೋಟೆಲಿನ ಆಸನಗಳ ಸಾಮರ್ಥ್ಯವನ್ನು 60ರಿಂದ 200ಕ್ಕೆ ಹೆಚ್ಚಿಸಿದ್ದೇವೆ. ನಗರದಲ್ಲಿ ಇನ್ನೂ ಎರಡು ಮಳಿಗೆಗಳನ್ನು ತೆರೆದಿದ್ದೇವೆ. ಈ ಯಶಸ್ಸಿಗೆ ಮುಖ್ಯ ಕಾರಣವೆಂದರೆ ಆಂಧ್ರ ಶೈಲಿಯ ಪಾಕಪದ್ಧತಿಯನ್ನು ಮುಂದುವರಿಸಿದ್ದು ಮತ್ತು ಇತರ ವಿಶೇಷ ಖಾದ್ಯಗಳನ್ನು ಪರಿಚಯಿಸಿದ್ದು. ಎರಡು ವರ್ಷಗಳ ಕಾಲ ಪ್ರತಿದಿನ 12-14 ಗಂಟೆಗಳ ಕೆಲಸ ಮಾಡಿದ್ದೇನೆ. ಸಾಮಾನು ತರುವುದು, ಅಡುಗೆಯ ಮೇಲ್ವಿಚಾರಣೆ, ಫ್ರಂಟ್ ಆಫೀಸ್.. ಎಲ್ಲವನ್ನೂ ನಾನೇ ನೋಡಿಕೊಳ್ಳುತ್ತಿದ್ದೆ. ಕೋವಿಡ್ ಸಮಯದಲ್ಲಿ ಹೊಸ ಬದಲಾವಣೆಗಳನ್ನು ಪ್ರಯೋಗ ಮಾಡಿದೆವು. ಆ ಸಮಯದಲ್ಲಿ 20 ವಿವಿಧ ಖಾದ್ಯಗಳನ್ನು ಕೇವಲ ರೂ.349 ಕ್ಕೆ ನೀಡುವ ನಮ್ಮ ಐಡಿಯಾ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿತು.
ಇದು ನಮ್ಮ ಫ್ಯಾಮಿಲಿ ರೆಸ್ಟೋರೆಂಟ್: ಹೋಟೆಲ್ಗಳಲ್ಲಿ ಕೆಲಸ ಮಾಡುವ ಅಡುಗೆ ಕಾರ್ಮಿಕರು ಹೆಚ್ಚಾಗಿ ಪುರುಷರೇ ಆಗಿರುತ್ತಾರೆ. ಬಿಸಿಲಿರುವಾಗಲೂ ಗಂಟೆಗಟ್ಟಲೆ ಅಡುಗೆ ಮನೆಯಲ್ಲಿ ಕಳೆಯಬೇಕಾಗುತ್ತದೆ. ಹೀಗಾಗಿಯೇ ಈ ವೃತ್ತಿ ಹೆಣ್ಣುಮಕ್ಕಳಿಗೆ ಇದು ಸೂಕ್ತವಲ್ಲ ಎನ್ನುತ್ತಾರೆ. ಆದರೆ ಹುಡುಗರಿಗೆ ಸಾಧ್ಯವಿರುವಾಗ ನಮಗೆ ಕೆಲಸ ಮಾಡಲು ಏಕೆ ಸಾಧ್ಯವಿಲ್ಲ? ಸದ್ಯ ನಮ್ಮ ಕಂಪನಿಯಲ್ಲಿ 100 ಜನರಿಗೆ ಉದ್ಯೋಗ ನೀಡಲಾಗಿದೆ. ಐದು ವರ್ಷಗಳಲ್ಲಿ ಸಾವಿರ ಜನರಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ. ನನ್ನ ತಂದೆ ಮತ್ತು ಕಿರಿಯ ಸಹೋದರ ಪ್ರಸ್ತುತ ನನಗೆ ಹೋಟೆಲ್ ನಿರ್ವಹಣೆಯಲ್ಲಿ ಸಹಾಯ ಮಾಡುತ್ತಿದ್ದಾರೆ. ನನ್ನ ತಾಯಿ ಸಾಂಬಾರು ಪದಾರ್ಥಗಳ ತಯಾರಿಕೆ ನೋಡಿಕೊಳ್ಳುತ್ತಾರೆ ಎಂದು ಯುವ ಉದ್ಯಮಿ ಮರೆಡ್ಡಿ ಹರಿಣಿ ವಿವರಿಸಿದರು.
ಇದನ್ನೂ ಓದಿ: ತಿಂಗಳಿಗೆ 25 ಲಕ್ಷ... ಸಂಬಳದ ಪತ್ನಿಯಾಗಿರುವಂತೆ ಹೇಳಿದ್ರಂತೆ ಉದ್ಯಮಿ!!