ನವದೆಹಲಿ: ಪೆಟ್ರೋಲ್ ಮಿಶ್ರಣಕ್ಕಾಗಿ ಬಳಸುವ ಕಬ್ಬಿನ ತ್ಯಾಜ್ಯದಿಂದ ಹೊರತೆಗೆಯಲಾದ (ಜೈವಿಕ ಇಂಧನ) ಎಥೆನಾಲ್ನ ಪ್ರತಿ ಲೀಟರ್ ಮೇಲೆ 1.84 ರೂ. ದರ ಏರಿಸಲಾಗಿದೆ. ಈ ಮೂಲಕ ತೈಲ ಆಮದು ಪ್ರಮಾಣವನ್ನು ವಾರ್ಷಿಕ 1 ಬಿಲಿಯನ್ ಡಾಲರ್ ಕಡಿತಗೊಳಿಸುವ ಉದ್ದೇಶವಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟದ ಸಭೆಯ ಬಳಿಕ ಮಾತನಾಡಿದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಆರ್ಥಿಕ ಸಚಿವಾಲಯ ಶಿಫಾರಸ್ಸಿನ ಮೇರೆಗೆ ದರ ಏರಿಕೆಯ ನಿರ್ಧಾರ ತೆಗೆದುಕೊಳ್ಳಲಾಗಿದೆ. ತೈಲ ಆಮದು ಪ್ರಮಾಣವನ್ನು ವಾರ್ಷಿಕ 1 ಬಿಲಿಯನ್ ಡಾಲರ್ ಕಡಿತಗೊಳಿಸುವ ಉದ್ದೇಶವಿದೆ ಎಂದು ಬೆಲೆ ಏರಿಕೆಗೆ ಕಾರಣ ಕೊಟ್ಟರು.
ಸಿ-ಹೆವಿ ಕಾಕಂಬಿಯಿಂದ ತಯಾರಿಸುವ ಎಥೆನಾಲ್ ದರದಲ್ಲಿ 29 ಪೈಸೆ ಹೆಚ್ಚಿಸಿ ₹ 43.75ಗೆ ಹಾಗೂ ಬಿ- ಹೆವಿ ಕಾಕಂಬಿಯಿಂದ ತಯಾರಿಸಲಾಗುವ ಎಥೆನಾಲ್ ದರವನ್ನು ₹ 1.84 ಏರಿಕೆ ಮಾಡಿ ₹ 54.27ಕ್ಕೆ ನಿಗದಿಪಡಿಸಲಾಗಿದೆ.
6ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರ:
ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳು ಮಂಗಳವಾರವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಥಾಸ್ಥಿತಿ ಕಾಪಾಡಿಕೊಂಡಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಕ್ರಮವಾಗಿ ₹ 72.01 ಹಾಗೂ ₹ 65.25ರಲ್ಲಿ ಮಾರಾಟವಾಗುತ್ತಿವೆ.
ಕಬ್ಬು ಬೆಳೆಗಾರರ ಬಾಕಿ ಪಾವತಿಗೆ ಅನುಕೂಲ:
ಇನ್ನು ಕೇಂದ್ರ ಸರ್ಕಾರದ ನಿರ್ಧಾರದಿಂದ ದೇಶದೆಲ್ಲೆಡೆ ಅದ್ರಲ್ಲೂ ಕರ್ನಾಟಕದಲ್ಲಿ ಸಕ್ಕರೆ ಕಾರ್ಖಾನೆಗಳು ಬೆಳೆಗಾರರಿಗೆ ಬಾಕಿ ಪಾವತಿ ಮಾಡಲು ಕೂಡಾ ಅನುವಾಗಲಿದೆ.