ನವದೆಹಲಿ: ಬಿಎಸ್ಎನ್ಎಲ್ ಹಾಗೂ ಎಂಟಿಎನ್ಎಲ್ ಈಗಿನ ದುಸ್ಥಿತಿಗೆ ಬಿಜೆಪಿಯೇ ಕಾರಣವೆಂಬ ಕಾಂಗ್ರೆಸ್ ಹೇಳಿಕೆಯನ್ನು ತಳಿಹಾಕಿದ ದೂರಸಂಪರ್ಕ ಸಚಿವ ಮನೋಜ್ ಸಿನ್ಹಾ, 'ಯುಪಿಎ ಆಡಳಿತ ಅವಧಿಯ ನಿರ್ಧಾರಗಳಿಂದ ಸಾರ್ವಜನಿಕ ಸ್ವಾಮ್ಯದ ಉಭಯ ಸಂಸ್ಥೆಗಳು ದುರ್ಬಲಗೊಂಡಿವೆ' ಎಂದು ಆರೋಪಿಸಿದ್ದಾರೆ.
ನಮ್ಮ ಆರ್ಥಿಕ ನೀತಿಗಳ ವಿರುದ್ಧ ಸುಳ್ಳು ಮತ್ತು ಆಧಾರ ರಹಿತ ಆರೋಪ ಮಾಡುವ ಮುನ್ನ ಕಾಂಗ್ರೆಸ್, ಮೊದಲು ಸಾಕಷ್ಟು ತಯಾರಿ ನಡೆಸಿ ಮನೆಗೆಲಸ ಮಾಡಿಕೊಳ್ಳಬೇಕು. ಯುಪಿಎ ಆಡಳಿತಾವಧಿಯಲ್ಲಿ ತೆಗೆದುಕೊಂಡ ನಿರ್ಧಾರಗಳಿಂದ ಪಿಎಸ್ಯುನ ಎರಡೂ ಕಂಪನಿಗಳು ಈ ದುಸ್ಥಿತಿಗೆ ತಲುಪಿವೆ. ಒತ್ತಡ ಪೂರ್ವಕವಾಗಿ ಸ್ಪೆಕ್ಟ್ರಮ್ (ತರಂಗಾಂತರ) ಖರೀದಿಗೆ ಹೆಚ್ಚುವರಿ ಹಣ ವಿನಿಯೋಗಿಸಿದ್ದರು ಎಂದು ಆಪಾದಿಸಿದ್ದಾರೆ.
ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ಟಿಲಿಕಾಂ ವಿಭಾಗದ (ಡಿಒಟಿ) ಅಟಾರ್ನಿ ಜನರಲ್ ಅಭಿಪ್ರಾಯ ಕೇಳಿದ್ದೇವೆ. ಉಭಯ ಸಂಸ್ಥೆಗಳ ಪುನರ್ಜೀವನಕ್ಕೆ ಎಲ್ಲ ವಿಧದ ಸಮಸ್ಯೆಗಳನ್ನು ಪರಿಹರಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಸಿನ್ಹಾ ಹೇಳಿದ್ದಾರೆ.