ಹೈದರಾಬಾದ್ (ತೆಲಂಗಾಣ): "ತೆಲಂಗಾಣ ಜವಳಿ ನೀತಿ ಭಾರತದಲ್ಲಿ ಉತ್ತಮವಾಗಿದೆ" ಎಂದು ತೆಲಂಗಾಣ ಐಟಿ ಮತ್ತು ಕೈಗಾರಿಕಾ ಸಚಿವ ಕೆ.ಟಿ.ರಾಮರಾವ್ ಹೇಳಿದರು.
ಅವರು ಇನ್ವೆಸ್ಟ್ ಇಂಡಿಯಾ ಎಕ್ಸ್ಕ್ಲೂಸಿವ್ ಇನ್ವೆಸ್ಟ್ಮೆಂಟ್ ಫೋರಂ ಆಯೋಜಿಸಿದ್ದ ವೆಬ್ನಾರ್ನಲ್ಲಿ 'ಜವಳಿ ಮತ್ತು ಉಡುಪು ವಲಯ ಆವೃತ್ತಿ' ಎಂಬ ಶೀರ್ಷಿಕೆಯಡಿ ಮಾತನಾಡಿದರು.
ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಭಾಗವಹಿಸಿದ್ದ ವೆಬ್ನಾರ್ನಲ್ಲಿ, ತೆಲಂಗಾಣದಲ್ಲಿ ಜವಳಿ ಉದ್ಯಮದಲ್ಲಿ ವಿವಿಧ ಹೂಡಿಕೆಯ ಅವಕಾಶಗಳಿವೆ. ರಾಜ್ಯದ ಜವಳಿ ಮತ್ತು ಉಡುಪು ಉದ್ಯಮಕ್ಕೆ ತೆಲಂಗಾಣ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ ಎಂದು ರಾಮರಾವ್ ಹೇಳಿದರು.
ತೆಲಂಗಾಣದ ಕಾಕತೀಯ ಮೆಗಾ ಟೆಕ್ಪಾರ್ಕ್ ಬಗ್ಗೆ ಪ್ರಸ್ತಾಪಿಸಿದ ಅವರು ಇದು ಭಾರತದ ಅತಿದೊಡ್ಡ ಜವಳಿ ಉದ್ಯಾನವಾಗಿದೆ ಎಂದು ತಿಳಿಸಿದರು.
ಸರ್ಕಾರ ಈಗಾಗಲೇ ರಾಜ್ಯದ ಕಂಪನಿಗಳಿಗೆ ನಿರಂತರ ವಿದ್ಯುತ್ ಸರಬರಾಜು ಮತ್ತು ನೀರು ಸರಬರಾಜು ನೀಡುತ್ತಿದೆ. ಮಿಷನ್ ಭಗೀರಥ ಕಾರ್ಯಕ್ರಮದಡಿ 10 ಶೇಕಡಾದಷ್ಟು ನೀರನ್ನು ಕೈಗಾರಿಕೆಗಳಿಗೆ ಹಂಚಿಕೆ ಮಾಡಲಾಗಿದೆ. ರಾಜ್ಯದಲ್ಲಿ ಈಗಾಗಲೇ 60 ಲಕ್ಷ ಎಕರೆ ಹತ್ತಿ ತೋಟವಿದೆ. ದಕ್ಷಿಣ ಭಾರತ ಮಿಲ್ಸ್ ಅಸೋಸಿಯೇಷನ್ 'ತೆಲಂಗಾಣದ ಹತ್ತಿ ಗುಣಮಟ್ಟವು ಭಾರತದಲ್ಲಿ ಮಾತ್ರವಲ್ಲದೇ ವಿಶ್ವದಾದ್ಯಂತ ಉತ್ತಮವಾಗಿದೆ' ಎಂದು ಘೋಷಿಸಿದೆ ಎಂದು ಅವರು ಹೇಳಿದರು.
ಕಳೆದ ಆರು ವರ್ಷಗಳಲ್ಲಿ ತೆಲಂಗಾಣ ರಾಜ್ಯವು ತನ್ನ ವಿಶಿಷ್ಟ ಕೈಗಾರಿಕಾ ನೀತಿಗಳೊಂದಿಗೆ ರಾಜ್ಯಕ್ಕೆ ಪ್ರಮುಖ ಹೂಡಿಕೆಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ ಎಂದು ಸ್ಮೃತಿ ಇರಾನಿ ಹೇಳಿದರು. ಅಧಿವೇಶನದಲ್ಲಿ ಸಚಿವ ಕೆಟಿಆರ್ ನೀಡಿದ ಆಲೋಚನೆಗಳನ್ನು ಅವರು ಶ್ಲಾಘಿಸಿದರು.
ಜವಳಿ ಉದ್ಯಮಗಳ ಮುಖ್ಯಸ್ಥರನ್ನು ಶ್ಲಾಘಿಸಿದ ಕೇಂದ್ರ ಜವಳಿ ಸಚಿವೆ, ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಪಿಪಿಇ ಕಿಟ್ಗಳನ್ನು ತಯಾರಿಸುವ ಅಗ್ರ ಎರಡನೇ ರಾಷ್ಟ್ರ ಭಾರತ ಎಂದು ಹೇಳಿದರು.