ಶ್ರೀನಗರ: ಏಪ್ರಿಲ್ನಲ್ಲಿ ನಡೆಯಲಿರುವ ಜೆ ಆ್ಯಂಡ್ ಕೆ ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ ಭಾಗವಹಿಸುವ ಸಂಭಾವ್ಯ ಹೂಡಿಕೆದಾರರಿಗಾಗಿ ಜಮ್ಮು ಮತ್ತು ಕಾಶ್ಮೀರ ಸರ್ಕಾರವು 6,000 ಎಕರೆ ಭೂಮಿಯನ್ನು ಗುರುತಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ವ್ಯಾಪ್ತಿಯ ಸಾಂಬಾ ಮತ್ತು ಕಥುವಾ ಜಿಲ್ಲೆಗಳು ಹಾಗೂ ಕಾಶ್ಮೀರ ಕಣಿವೆ ಪ್ರದೇಶದ ಪುಲ್ವಾಮಾ ಮತ್ತು ಅನಂತ್ನಾಗ್ ಜಿಲ್ಲೆಗಳಲ್ಲಿ ಹೂಡಿಕೆಗೆ ಜಾಗ ಮೀಸಲಿಡಲಾಗಿದೆ.
ಜನವರಿ 20ರಂದು ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಗಿರೀಶ್ ಚಂದ್ರ ಮುರ್ಮು ಅವರು, ಏಪ್ರಿಲ್ ತಿಂಗಳಲ್ಲಿ ಮೊದಲ ಜಮ್ಮು ಮತ್ತು ಕಾಶ್ಮೀರ ಜಾಗತಿಕ ಹೂಡಿಕೆದಾರರ ಶೃಂಗಸಭೆ ಆಯೋಜಿಸುವುದಾಗಿ ಘೋಷಿಸಿದ್ದರು.
ಶೃಂಗಸಭೆಯು ಎಲ್ಲಾ ಜಾಗತಿಕ ಹೂಡಿಕೆದಾರರಿಗೆ ಮತ್ತು ಸ್ಥಳೀಯ ಕೈಗಾರಿಕೋದ್ಯಮಿಗಳಿಗೆ ಮಾತ್ರವಲ್ಲದೇ ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ವ್ಯವಹಾರಗಳನ್ನು ಸ್ಥಾಪಿಸಲು ಮತ್ತು ವಿಸ್ತರಿಸಲು ಬಯಸುವ ದೇಶದ ಇತರ ಭಾಗಗಳಿಂದ ಬಂದವರಿಗೆ ಮುಕ್ತವಾಗಿ ತೆರೆದಿರುತ್ತದೆ ಎಂದು ಸಿಡ್ಕೊ ಎಂಡಿ ರವೀಂದ್ರ ಕುಮಾರ್ ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ಹೂಡಿಕೆದಾರರನ್ನು ಆಕರ್ಷಿಸಲು ಇತರ ರಾಜ್ಯಗಳಲ್ಲಿ ರಸ್ತೆ ಪ್ರದರ್ಶನಗಳನ್ನು ಆಯೋಜಿಸಿ ಸಮಾವೇಶಗಳನ್ನು ನಡೆಸುತ್ತೇವೆ. ಶ್ರೀನಗರ ಮತ್ತು ಜಮ್ಮುವಿನಲ್ಲಿ ಮೂರು ದಿನಗಳ ಕಾಲ ಶೃಂಗಸಭೆ ನಡೆಯಲಿದೆ ಎಂದು ಹೇಳಿದರು.