ನವದೆಹಲಿ: ಗುರುವಾರ ಸಂಸತ್ತಿನಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆಯು ದೇಶದ ಆರ್ಥಿಕತೆಯ ಈ ಹಿಂದಿನ ವರ್ಷದ ಶೇ 6.8ರಷ್ಟು ಜಿಡಿಪಿಗಿಂತ ಶೇ 7ರ ಪ್ರಮಾಣದಲ್ಲಿ ವೃದ್ಧಿಸುವ ಗುರಿ ಇರಿಸಿಕೊಂಡಿದೆ.
ಹೂಡಿಕೆ ಕ್ಷೇತ್ರದಲ್ಲಿ ಹಿನ್ನಡೆ ಆಗಿದ್ದರಿಂದ ಆರ್ಥಿಕ ಬೆಳವಣಿಗೆ ಅಲ್ಪ ಕುಸಿತ ದಾಖಲಿಸಿದೆ. ಹೀಗಾಗಿಯೇ ಆರ್ಥಿಕ ವಲಯದಲ್ಲಿ ಅಲ್ಪ ಕುಂಠಿತ ಕಂಡುಬಂದಿದೆ ಎಂದು ಆರ್ಥಿಕ ಸಮೀಕ್ಷೆ ವರದಿಯನ್ನು ಸಿದ್ಧಪಡಿಸಿದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಹಾಗೂ ಅವರ ತಂಡು ಕಂಡುಕೊಂಡಿದೆ.
ಈ ಸಮೀಕ್ಷೆಯು ಭಾರತದ ಆರ್ಥಿಕತೆಯನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುವಂತೆ ಸಿದ್ಧಪಡಿಸಿದೆ. ಕೇವಲ ಸಮತೋಲನದ ದೃಷ್ಟಿಯಲ್ಲಿ ತಯಾರಿಸದೆ ಆಂಗ್ಲೋ-ಸ್ಯಾಕ್ಸನ್ ಚಿಂತನೆಯ ಮೇಲೆ ರೂಪಿಸಲು ಬಯಸಿದೆ. ಸಾಂಪ್ರದಾಯಿಕ ದೃಷ್ಟಿಕೋನದ ತಳಹದಿಯ ಮೇಲೆ ಉದ್ಯೋಗ ಸೃಷ್ಟಿ, ಬೇಡಿಕೆ ಹೆಚ್ಚಳ ರಫ್ತು ಮತ್ತು ಆರ್ಥಿಕ ಬೆಳವಣಿಗೆಯಂತಹ ಸಮಸ್ಯೆಗಳನ್ನು ಪ್ರತ್ಯೇಕವಾಗಿ ಬಗೆಹರಿಸಲು ಯತ್ನಿಸುವ ಚಿಂತನೆಗಳನ್ನು ಸೇರ್ಪಡೆ ಮಾಡಿದ್ದಾರೆ. ಹೊಸ ವಿಧಾನಗಳ ಮೂಲಕ ಹೂಡಿಕೆಯನ್ನು ಪ್ರಮುಖ ಚಾಲಕ ಶಕ್ತಿಯನಾಗಿಸಿ ಆರ್ಥಿಕತೆಗಯ ಚಕ್ರಕ್ಕೆ ವೇಗವರ್ಧಿಸುವತ್ತ ಚಿತ್ತ ಹರಿಸಿದ್ದಾರೆ.
ಚೀನಾ ವಿಧಾನ: ಭಾರತವು ಚೀನಾದಂತೆ ಹೂಡಿಕೆ- ಚಾಲಿತ ಆರ್ಥಿಕತೆಯಾಗಿರಬೇಕು ಎಂಬುದು ಸಮೀಕ್ಷೆಯ ಆಶೆಯವಾಗಿದೆ. ಹೂಡಿಕೆಗಳು ಆರ್ಥಿಕತೆಗೆ ಅಪಾಯಕಾರಿ ಆಗಬಾರದು. ಜನತೆಗೆ ಉಳಿತಾಯದ ಮುನ್ನೆಚ್ಚರಿಕೆ ಇರಬೇಕು ಬೇಕು ಎಂಬ ನಿಲುವೂ ಇದೆ. ಚೀನವೂ ಹೆಚ್ಚಿನ ಹೂಡಿಕೆಯ ಜೊತೆಗೆ ಉದ್ಯೋಗಗಳ ಸೃಷ್ಟಿಯತ್ತ ನೋಟ ನೆಟ್ಟಿದೆ. ಹೂಡಿಕೆಗಳು ದೇಶದ ಉತ್ಪಾದಕತೆ ಹೆಚ್ಚಿಸುತ್ತದೆ. ಆ ಮೂಲಕ ಅಂತಾರಾಷ್ಟ್ರೀಯ ಸ್ಪರ್ಧಾತ್ಮಕತೆ ವೃದ್ಧಿಯಾಗುತ್ತದೆ ಎಂಬುದನ್ನು ಸಮೀಕ್ಷೆ ಮನವರಿಕೆ ಮಾಡಿಕೊಟ್ಟಿದೆ.