ಬಾಗಲಕೋಟೆ: ಬಾಗಲಕೋಟೆ ಮಹಾನಗರ ಪಾಲಿಕೆ ನನ್ನ ಕನಸು. ಜನಗಣತಿ ಮುಗಿಯುತ್ತಿದ್ದಂತೆ ಈ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎಂದು ಶಾಸಕ, ಬಿಟಿಡಿಎ ಸಭಾಪತಿ ಡಾ.ವೀರಣ್ಣ ಚರಂತಿಮಠ ಹೇಳಿದರು.
ನವನಗರದ ಶ್ರೀಕೃಷ್ಣಮಠದಲ್ಲಿ ವ್ರತ ಕೈಗೊಂಡಿರುವ ಉತ್ತರ ಪ್ರದೇಶ ಪ್ರಯಾಗದ ಶಾಖಾಮಠದ ಶ್ರೀವಿದ್ಯಾತ್ಮತೀರ್ಥ ಶ್ರೀಪಾದಂಗಳವರ ಆಶೀರ್ವಾದ ಸ್ವೀಕರಿಸಿ ಮಾತನಾಡಿದ ಅವರು, ಈಗಾಗಲೇ ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ. ಮುಂದಿನ ಹೆಜ್ಜೆ ಮಹಾನಗರಪಾಲಿಕೆ ಎಂದರು.
ನವನಗರದ ಎಲ್ಲ ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಸಂತ್ರಸ್ತರಿಗೆ ನೆಮ್ಮದಿಯ ಬದುಕು, ವಾಣಿಜ್ಯ ಚಟುವಟಿಕೆಗೆ ಶಕ್ತಿ ನೀಡಲು ಸಂಕಲ್ಪ ತೊಟ್ಟಿದ್ದೇನೆ. ಈ ಕಾರ್ಯದಲ್ಲಿ ಎಲ್ಲರೂ ಸಹಕಾರ ನೀಡಿ ಎಂದು ಮನವಿ ಮಾಡಿಕೊಂಡರು. ಉಡುಪಿ ಪೇಜಾವರ ಮಠಾಧೀಶರಾಗಿದ್ದ ಶ್ರೀವಿಶ್ವೇಶತೀರ್ಥ ಶ್ರೀಪಾದಂಗಳವರು ನನ್ನ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು. ನಾನು ಅವರ ಪರಮ ಭಕ್ತ. ಅವರ ವೃಂದಾವನ ಬಾಗಲಕೋಟೆಯಲ್ಲಿ ನಿರ್ಮಾಣವಾಗಬೇಕು. ಇದಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು.
ಅಖಿಲ ಭಾರತ ಮಧ್ವಮಹಾಮಂಡಳಿ ಬಾಗಲಕೋಟೆ ಶಾಖೆಯ ಕಾರ್ಯಾಧ್ಯಕ್ಷ ಕೆ.ಎಸ್.ದೇಶಪಾಂಡೆ ಮಾತನಾಡಿ, ಚರಂತಿಮಠ ಅವರು ಬಿಟಿಡಿಎ ಸಭಾಪತಿಯಾಗಿರುವುದು ಒಳ್ಳೆಯ ಕೆಲಸ, ಅವರಿಂದ ಉತ್ತಮ ಕೆಲಸಗಳಾಗುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದರು.
ಈ ವೇಳೆ, ಕಾರ್ಯದರ್ಶಿ ಸತ್ಯನಾರಾಯಣ ಮಾರ್ಕೋಡ, ಪಂಡಿತರಾದ ಬಿಂದು ಮಾಧವಾಚಾರ್ಯ ನಾಗಸಂಪಿಗೆ, ವಿಜಯೇಂದ್ರಾಚಾರ್ಯ ಯತ್ನಟ್ಟಿ, ನವೀನಾಚಾರ್ಯ ಜೋಶಿ, ಪ್ರಮೋದಾಚಾರ್ಯ ಆಲೂರ, ಹರಿ ಪಾಟೀಲ, ಆರ್.ಆರ್.ಜೋಶಿ, ಪ್ರದೀಪ ಪರ್ವತಿಕರ, ರಾಜಾಚಾರ್ ತಾಳಿಕೋಟಿ, ವಿನಾಯಕ ತಾಳಿಕೋಟಿ, ವೆಂಕಟೇಶರಾವ್, ಸಂತೋಷ ಗದ್ದನಕೇರಿ ಮತ್ತಿತರರು ಉಪಸ್ಥಿತರಿದ್ದರು. ಚರಂತಿಮಠ ಅವರನ್ನು ಕೃಷ್ಣಮಠದ ವತಿಯಿಂದ ಸನ್ಮಾನಿಸಲಾಯಿತು.