ಬೆಂಗಳೂರು: ರೆಮ್ಡೆಸಿವಿರ್ ಔಷಧ ಮಧ್ಯವರ್ತಿಗಳ ಮೂಲಕ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದು, ಈ ಸಂಬಂಧ ಕಠಿಣ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್ಗೆ ಪತ್ರ ಬರೆದಿದ್ದಾರೆ.
ರೆಮ್ಡೆಸಿವಿರ್ ಔಷಧಕ್ಕೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ಆದರೆ ಈ ಔಷಧ ಜನಸಾಮಾನ್ಯರ ಕೈಗೆ ಸಿಗುತ್ತಿಲ್ಲ. ಆದರೆ ಮಧ್ಯವರ್ತಿಗಳು ಪ್ರತಿ ಟ್ರಯಲ್ಗೆ ಸುಮಾರು 30,000 ರೂ.ಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಔಷಧದ ಎಂಆರ್ಪಿ ಬೆಲೆ 900-4000 ರೂ. ಆಗಿದೆ. ಈ ಔಷಧ ಬ್ರೋಕರ್ಗಳ ಕೈಗೆ ಹೇಗೆ ಸಿಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಈಗಿನ ನಿಯಮದಂತೆ ಔಷಧ ತಯಾರಕರು ಇದನ್ನು ನೇರವಾಗಿ ವಿತರಕರಿಗೆ ಮಾರಾಟ ಮಾಡುವಂತಿಲ್ಲ. ಸರ್ಕಾರವೇ ನೇರವಾಗಿ ತಯಾರಕರಿಂದ ರೆಮ್ಡೆಸಿವಿರನ್ನು ಖರೀದಿ ಮಾಡುತ್ತಿದೆ. ಡ್ರಗ್ ಕಂಟ್ರೋಲ್ ಈ ಔಷಧಗಳನ್ನು ಸಂಗ್ರಹಿಸಿಡುತ್ತಿದ್ದು, ಅವರು ನೇರವಾಗಿ ಆಸ್ಪತ್ರೆಗಳಿಗೆ ಅಗತ್ಯ ಇಂಜೆಕ್ಷನ್ನ್ನು ಪೂರೈಕೆ ಮಾಡಬೇಕಾಗಿದೆ. ಈ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳಿಗೆ ಯಾವುದೇ ಅವಕಾಶ ಇಲ್ಲ. ಹಾಗಿದ್ದರೂ ಔಷಧ ಮಧ್ಯವರ್ತಿಗಳ ಕೈಗೆ ಹೇಗೆ ಸೇರುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಆಸ್ಪತ್ರೆಗಳು ರೆಮ್ಡೆಸಿವಿರ್ ಕೊರತೆ ಬಗ್ಗೆ ದೂರು ನೀಡುತ್ತಿದ್ದಾರೆ. ಸರ್ಕಾರ ಡ್ರಗ್ ಕಂಟ್ರೋಲರ್ ಮೇಲಿನ ಹಿಡಿತ ಕಳೆದುಕೊಂಡಿದೆ. ಡ್ರಗ್ ಕಂಟ್ರೋಲರ್ ಮತ್ತು ಮಧ್ಯವರ್ತಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಕೂಡಲೇ ಈ ಸಂಬಂಧ ಸರ್ಕಾರ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.