ನವದೆಹಲಿ : ಕರ್ನಾಟಕದಲ್ಲಿ ಸಿಎಂ ಬದಲಾವಣೆ ಚರ್ಚೆ ಮುನ್ನೆಲೆಗೆ ಬರುತ್ತಿದ್ದಂತೆ ಈಗ ಇದಕ್ಕೆ ಕೇಂದ್ರ ವೇದಿಕೆ ಒದಗಿಸಿದಂತಾಗಿದೆ. ಈ ಹಿನ್ನೆಲೆ ಸಭೆಯಲ್ಲಿ ಸಿಎಂ ಬದಲಾವಣೆ ಚರ್ಚೆ ಮಹತ್ವ ಪಡೆದುಕೊಳ್ಳಲಿದೆ. ಮುಂಬರುವ ವಿಧಾನಸಭಾ ಚುನಾವಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲು ಜೂನ್ 21ರಿಂದ ಜೂನ್ 30ರವರೆಗೆ ರಾಜ್ಯ ಕಾರ್ಯಕಾರಿ ಮಂಡಳಿ ಸಭೆ ನಡೆಸುವಂತೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪಕ್ಷದ ಎಲ್ಲಾ ರಾಜ್ಯಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದಾರೆ. ಈ ಹಿನ್ನೆಲೆ ಕರ್ನಾಟಕದಲ್ಲಿ ನಡೆಯುವ ಈ ಸಭೆ ಭಾರೀ ಪ್ರಾಮುಖ್ಯತೆ ಪಡೆದಿದೆ.
ಉದ್ಘಾಟನಾ ಮತ್ತು ಮುಕ್ತಾಯದ ಅಧಿವೇಶನ, ಸಂತಾಪ ಸೂಚನೆ, ಮುಂಬರುವ ವಿಧಾನಸಭಾ ಚುನಾವಣೆಗಳ ಚರ್ಚೆಗಳು ಹಾಗೂ "ಸೇವೆಯೇ ಸಂಘಟನೆ" ಅಭಿಯಾನ ಮತ್ತು ಇತರ ಚಟುವಟಿಕೆಗಳ ಕುರಿತು ಚರ್ಚೆ ನಡೆಸಲು ನಡ್ಡಾ ಆದೇಶಿಸಿದ್ದಾರೆ. ಜುಲೈ 1 ರಿಂದ 15ರವರೆಗೆ ಜಿಲ್ಲಾ ಕಾರ್ಯಕಾರಿ ಮಂಡಳಿಗಳ ಸಭೆಗಳನ್ನು ನಡೆಸುವಂತೆ ನಿರ್ದೇಶನ ನೀಡಿದ್ದಾರೆ. ಇದರೊಂದಿಗೆ ಎಲ್ಲಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಜುಲೈ 31ರ ಮೊದಲು ಆಯಾ ರಾಜ್ಯಗಳಿಗೆ ಮರಳುವಂತೆ ತಿಳಿಸಿದ್ದಾರೆ.
ನಡ್ಡಾ ಅವರ ಪತ್ರದ ಪ್ರಕಾರ, ಜೂನ್ 18ರಂದು "ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಕ್ಕಟ್ಟನ್ನು ಎದುರಿಸುತ್ತಿರುವ ರಾಷ್ಟ್ರ" ಎಂಬ ವಿಷಯದ ಬಗ್ಗೆ ಸಭೆ ಆಯೋಜಿಸಲಾಗುವುದು, ಇದನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್, ದಿಲೀಪ್ ಸೈಕಿಯಾ ಮತ್ತು ಪ್ರಮುಖರು ನಡೆಸಲಿದ್ದಾರೆ ಎಂದು ಉಲ್ಲೇಖ ಮಾಡಲಾಗಿದೆ.