ಧಾರವಾಡ: ರಾಜ್ಯದಲ್ಲಿ ಲಾಕ್ಡೌನ್ ಜಾರಿ ವಿಚಾರವಾಗಿ ಸದ್ಯ ಮೇ 4ರವರೆಗೆ ಕಠಿಣ ನಿಯಮ ಇರಲಿದೆ. ಮುಂದಿನ ವಾರವೂ ವೀಕೆಂಡ್ ಕರ್ಫ್ಯೂ ಇರತ್ತೆ ಎಂದು ಧಾರವಾಡದಲ್ಲಿ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಳಿದ ದಿನದ ಕರ್ಫ್ಯೂ ಬಗ್ಗೆ ಚರ್ಚೆ ನಡೆದಿದೆ. ಲಾಕ್ಡೌನ್ ಬಗ್ಗೆಯೂ ಚರ್ಚೆ ನಡೀತಾ ಇದೆ. ನಾಳೆಯ ಕ್ಯಾಬಿನೆಟ್ ಸಭೆಯಲ್ಲಿ ಇದು ಚರ್ಚೆ ಆಗಲಿದೆ. ನಾಳೆ ಬೆಳಗ್ಗೆ 11ಕ್ಕೆ ಕ್ಯಾಬಿನೆಟ್ ಸಭೆ ಇದೆ. ಕ್ಯಾಬಿನೆಟ್ನಲ್ಲಿ ಸಿಎಂ ಮುಂದಿನ ನಿರ್ಧಾರ ತಗೋತಾರೆ ಎಂದರು.
ಕಟ್ಟುನಿಟ್ಟಿನ ನಿಯಮ ಹಾಕದಿದ್ದರೆ ಕೊರೊನಾ ನಿಯಂತ್ರಣ ಆಗುವುದಿಲ್ಲ. ಧಾರ್ಮಿಕ ಕಾರ್ಯಕ್ರಮ, ಜಾತ್ರೆ, ಮದುವೆಗೆ ಸಾವಿರಾರು ಜನ ಹೊರಡುತ್ತಿದ್ದಾರೆ. ಅದನ್ನು ನಿಯಂತ್ರಿಸಬೇಕಿದೆ ಎಂದರು.
ಕಠಿಣ ನಿಯಮದಿಂದ ಹಿಂದೆ ವ್ಯಾಪಾರಕ್ಕೆ ತೊಂದರೆ ಆಗಿತ್ತು. ಹಿಂದೆಲ್ಲ 3-3 ತಿಂಗಳು ಲಾಕ್ಡೌನ್ ಇತ್ತು. ಈಗ ಕೇವಲ 8-10 ದಿನದ ಲಾಕ್ಡೌನ್ ಅಷ್ಟೇ ಇದೆ. ಹಿಂದಿನ ವರ್ಷಕ್ಕಿಂತ ಈಗ ಕೊರೊನಾ ಜಾಸ್ತಿಯಿದೆ ಎಂದರು.