ಚಿಕ್ಕೋಡಿ : ರಾಜ್ಯಸಭೆ ಟಿಕೆಟ್ ವಂಚಿತ ಮಾಜಿ ಸಂಸದ ರಮೇಶ್ ಕತ್ತಿ ನಿವಾಸಕ್ಕೆ ನೂತನ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಭೇಟಿ ನೀಡಿದರು. ವಿಶೇಷ ಅಂದ್ರೆ ಟಿಕೆಟ್ ಸಿಗದ ಅಸಮಾಧಾನವಿದ್ರೂ ಆ ನೋವು ಮರೆತು ರಮೇಶ್ ಕತ್ತಿ ನಗೆ ಬೀರಿದರು.
ನೂತನ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಮಾಜಿ ಸಂಸದ ರಮೇಶ ಕತ್ತಿ ಅವರಿಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಭೇಟಿಯಾಗಿ ತಮ್ಮ ಆಯ್ಕೆಗೆ ಸಹಕಾರ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ನನಗೆ ಟಿಕೆಟ್ ಸಿಗದಿರುವ ನೋವಿಗಿಂತ ಓರ್ವ ಪ್ರಾಮಾಣಿಕ, ಪಕ್ಷದ ಶಿಸ್ತಿನ ಸಿಪಾಯಿಗೆ ಟಿಕೆಟ್ ನೀಡಿದ್ದು ಸಂತಸ ತಂದಿದೆ. ಬರುವ ದಿನಗಳಲ್ಲಿ ರಾಜ್ಯದ ಸಮಸ್ಯೆಗಳನ್ನು ನಿವಾರಿಸಿಸಲು ಕೇಂದ್ರದ ಗಮನ ಸೆಳೆಯುವಂತೆ ರಮೇಶ್ ಕತ್ತಿ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಈರಣ್ಣ ಕಡಾಡಿ ಮಾತನಾಡಿ, ನಾನು ಹಾಗೂ ರಮೇಶ್ ಕತ್ತಿ ಅಣ್ಣ-ತಮ್ಮಂದಿರಿದ್ದಂತೆ. ಎಲ್ಲರ ಸಲಹೆ, ಸಹಕಾರದೊಂದಿಗೆ ರಾಜ್ಯದ ಸಮಸ್ಯೆಗಳ ಬಗ್ಗೆ ಕೇಂದ್ರದ ಗಮನ ಸೆಳೆಯುತ್ತೇನೆ. ರಾಜ್ಯಕ್ಕೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.