ಮಂಗಳೂರು: ನಗರದಲ್ಲಿ ಈಚೆಗೆ ನಡೆದ ಶ್ರೀಮತಿ ಶೆಟ್ಟಿಯವರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ವಿವಿಧೆಡೆಯಿಂದ ಹಲವಾರು ಸಾಕ್ಷಿಗಳನ್ನು ಸಂಗ್ರಹಿಸಿದ್ದು, ತನಿಖೆ ಚುರುಕುಗೊಳಿಸಲಾಗಿದೆ.
ನಾಲ್ವರು ಶಂಕಿತರನ್ನು ಸೋಮವಾರವೇ ವಶಕ್ಕೆ ಪಡೆಯಲಾಗಿದೆ. ನಗರದ ಆಯಕಟ್ಟಿನ ಭಾಗದಲ್ಲಿರುವ ಸಿಸಿಟಿವಿ ಫುಟೇಜ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಿಳೆಯ ಮೊಬೈಲ್ ಕರೆಯ ವಿವರಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ತಂತ್ರಜ್ಞರ ತಂಡವು ಪ್ರಕರಣವನ್ನು ಎಳೆಎಳೆಯಾಗಿ ಬಿಡಿಸುತ್ತಾ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಪೊಲೀಸರು ಸಂಗ್ರಹಿಸಿದ ಎಲ್ಲ ದಾಖಲೆಗಳನ್ನು ಕ್ರೋಢೀಕರಿಸಿ, ವಿಶ್ಲೇಷಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಗುರಿ ಸಮೀಪದ ಬಾವಿಯೊಂದರಲ್ಲಿ ಕಾಲುಗಳು ಪತ್ತೆಯಾಗಿವೆ ಎನ್ನುವ ಶಂಕೆ ಮೂಡಿತ್ತು. ಶ್ವಾನದಳ ತಪಾಸಣೆ ನಡೆಸಲಾಗಿ ಅದರ ಸುತ್ತ ಎರಡು ಸುತ್ತು ಹಾಕಿವೆ. ಬಳಿಕ ಸಿಬ್ಬಂದಿಯಿಂದ ಬಾವಿಯನ್ನು ತಪಾಸಣೆ ನಡೆಸಲಾಯಿತು. ಮೋಟಾರ್ ಬಳಸಿ ನೀರನ್ನು ಹೊರ ತೆಗೆಯಲಾಯಿತು. ಮಧ್ಯಮ ಗಾತ್ರದ ಪ್ಲಾಸ್ಟಿಕ್ ಚೀಲಗಳು ಪತ್ತೆಯಾಗಿದೆಯೇ ಹೊರತು ಯಾವುದೇ ಅಂಗಾಂಗಗಳು ಪತ್ತೆಯಾಗಿಲ್ಲ.
ನಾಗುರಿ ಸಮೀಪ ಸೋಮವಾರ ರಾತ್ರಿ ಶ್ರೀಮತಿ ಶೆಟ್ಟಿಯವರ ದ್ವಿಚಕ್ರ ವಾಹನ ಸಿಕ್ಕಿರುವುದು ನಿಜ. ಆದರೆ, ಬಾವಿಯಲ್ಲಿ ಮಹಿಳೆಯ ಅಂಗಾಂಗಗಳಿವೆ ಎನ್ನುವುದು ಸುಳ್ಳು. ಇದೊಂದು ಹುಸಿ ಕರೆಯಾಗಿದೆ. ತಪಾಸಣೆ ವೇಳೆ ತನಿಖೆಗೆ ಸಹಕಾರಿಯಾಗುವಂತಹ ಯಾವುದೇ ಸಾಕ್ಷಿಗಳು ದೊರೆತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.