ರಘುನಾಥಗಂಜ್(ಪಶ್ಚಿಮಬಂಗಾಳ): ವಾಮಾಚಾರ ಮಾಡಿದ ಶಂಕೆಯ ಮೇಲೆ ಗ್ರಾಮಸ್ಥರೆಲ್ಲರೂ ಸೇರಿ ಕುಟುಂಬವೊಂದರ ಮೇಲೆ ದೌರ್ಜನ್ಯ ನಡೆಸಿದ್ದಲ್ಲದೇ, ಮೂತ್ರ ಕುಡಿಸಿದ ಅಮಾನವೀಯ ಘಟನೆ ಪಶ್ಚಿಮ ಬಂಗಾಳದಲ್ಲಿ ಬೆಳಕಿಗೆ ಬಂದಿದೆ.
ಮುರ್ಷಿದಾಬಾದ್ನ ರಘುನಾಥಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಮಥುರಾಪುರ ಆದಿವಾಸಿಪಾರಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕುಟುಂಬಕ್ಕೆ ಮೂತ್ರ ಕುಡಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ರಘುನಾಥಗಂಜ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಆರೋಪವೇನು?: ಮಥುರಾಪುರ ಆದಿವಾಸಿಪಾರಾದಲ್ಲಿ ಕುಟುಂಬವೊಂದು ವಾಮಾಚಾರ ನಡೆಸಿದ ಆರೋಪ ಹೊತ್ತಿದೆ. ಇದರಿಂದ ನೆರೆಮನೆಯ ವ್ಯಕ್ತಿಯೊಬ್ಬ ಅಕಾಲಿಕವಾಗಿ ಮರಣ ಹೊಂದಿದ್ದಾನೆ. ಇದು ಆ ಕುಟುಂಬಸ್ಥರು ಮತ್ತು ಗ್ರಾಮಸ್ಥರನ್ನು ಕೆರಳಿಸಿದೆ. ಇದರಿಂದ ಊರ ಜನರು ಒಟ್ಟಾಗಿ ಆರೋಪಿ ಕುಟುಂಬದ ಎಲ್ಲ ಸದಸ್ಯರನ್ನು ರಸ್ತೆಗೆ ಎಳೆ ತಂದು ಕೂರಿಸಿದ್ದಾರೆ.
ಕ್ರೋಧಗೊಂಡ ಜನರು ವೃದ್ಧ ಎಂದೂ ನೋಡದೇ ಕುಟುಂಬಸ್ಥರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಅಶ್ಲೀಲವಾಗಿ ನಿಂದಿಸಿದ್ದಲ್ಲದೇ ಮೂತ್ರವನ್ನು ಕುಡಿಯುವಂತೆ ಒತ್ತಾಯಿಸಲಾಗಿದೆ. ಆರೋಪಿ ಕುಟುಂಬದ ವ್ಯಕ್ತಿಯೊಬ್ಬ ಬಾಟಲಿಯಲ್ಲಿ ಕುಡಿಯುತ್ತಿರುವುದು ವಿಡಿಯೋದಲ್ಲಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ.
ತೀವ್ರ ಭಯಗೊಂಡ ಕುಟುಂಬಸ್ಥರು ಅಸಹಾಯಕರಾಗಿ ಕೂತಿದ್ದು, ಮಕ್ಕಳು ಜೋರಾಗಿ ಅಳುತ್ತಿದ್ದಾರೆ. ಅಲ್ಲದೇ, ಸುತ್ತುವರಿದ ಜನರು ಅವರನ್ನು ಅಶ್ಲೀಲವಾಗಿ ನಿಂದಿಸುತ್ತಿರುವುದೂ ವಿಡಿಯೋದಲ್ಲಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಗ್ರಾಮಕ್ಕೆ ಆಗಮಿಸಿ ಕ್ರಮ ಕೈಗೊಂಡಿದ್ದಾರೆ.
ಓದಿ: ಸಿಲ್ಲಿ ಫೈಟ್.. ಕ್ರೀಂಬನ್ನಲ್ಲಿ ಕ್ರೀಂ ಇಲ್ಲವೆಂದು ಬೇಕರಿ ಮಾಲೀಕನ ಮೇಲೆ ಹಲ್ಲೆ ಮಾಡಿದ ಗ್ಯಾಂಗ್