ಜೈಪುರ: ಈ ವರ್ಷದ ಆಗಸ್ಟ್ನಲ್ಲಿ ನಡೆದ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನದಿಂದ ದೂರ ಉಳಿದಿದ್ದಕ್ಕಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ತಮ್ಮ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ತಾವು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದಾಗ ಮಮತಾ ತಮ್ಮ ವಿರುದ್ಧ ಬಹಿರಂಗವಾಗಿ ಮತ್ತು ಬರವಣಿಗೆಯ ಮೂಲಕ ಸಾಧ್ಯವಿರುವುದೆಲ್ಲವನ್ನೂ ಮಾಡಿದರು. ಆದರೆ ಅವರು ಏನೇ ಹೇಳಿದರೂ ಅದಕ್ಕೆ ವಿರುದ್ಧವಾಗಿ, ಮಮತಾರ ಘನತೆಗೆ ಕುಂದು ಬರುವಂತೆ ತಾವು ಒಂದೇ ಒಂದು ಶಬ್ದವನ್ನು ಆಡಲಿಲ್ಲ ಎಂದು ಧನಕರ್ ತಿಳಿಸಿದರು. ಮಂಗಳವಾರ ರಾಜಸ್ಥಾನ ವಿಧಾನಸಭೆಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮವನ್ನು ಉದ್ದೇಶಿಸಿ ಧನಕರ್ ಮಾತನಾಡಿದರು.
ನಾನು ಇನ್ನು ಮುಂದೆ ನಿಮ್ಮ ರಾಜ್ಯದ ರಾಜ್ಯಪಾಲನಲ್ಲ. ಸಂವಿಧಾನಕ್ಕೆ ವಿರುದ್ಧವಾಗಿ ನಾನು ಏನಾದರೂ ಮಾತನಾಡಿರುವೆನಾ ಎಂಬುದನ್ನು ಮಮತಾ ಎದೆಯ ಮೇಲೆ ಕೈಯಿಟ್ಟು ಕೇಳಿಕೊಳ್ಳಲಿ. ಅವರು ಏನೇ ಹೇಳಿದರೂ ನಾನು ಅವರ ಘನತೆಗೆ ಕುಂದು ಬರುವಂತೆ ಏನೂ ಮಾತನಾಡಿಲ್ಲ. ಆದಾಗ್ಯೂ ಈ ಸದನದ ಮೂಲಕ ನಾನು ಅವರ ಕ್ರಮಕ್ಕಾಗಿ ಪ್ರಥಮ ಬಾರಿಗೆ ಧನ್ಯವಾದ ಹೇಳುತ್ತಿರುವೆ ಎಂದು ಅವರು ನುಡಿದರು.
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರೊಂದಿಗೆ ಮಮತಾ ಬ್ಯಾನರ್ಜಿ ಕುರಿತಾದ ಸಂವಾದವನ್ನು ಧನಕರ್ ನೆನಪಿಸಿಕೊಂಡರು.
ಇದನ್ನು ಓದಿ:ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸೋನಿಯಾ, ರಾಹುಲ್ ಪರ್ಮಿಷನ್ ಬೇಕಿಲ್ಲ: ಜೈರಾಮ್ ರಮೇಶ್