ಅಗರ್ತಲಾ (ತ್ರಿಪುರ): ತ್ರಿಪುರಾದ ಗೋಮತಿ ಜಿಲ್ಲೆಯ ಸಿಲಚಾರಿ ಪ್ರದೇಶದ ಇಂಡೋ - ಬಾಂಗ್ಲಾ ಗಡಿಯಲ್ಲಿ ನಿನ್ನೆ ಸಂಜೆ 5:45ರ ಸುಮಾರಿಗೆ ಸಹೋದ್ಯೋಗಿಗಳ ನಡುವೆ ಗಲಾಟೆ ನಡೆದಿದ್ದು, ಆ ಸಂದರ್ಭದಲ್ಲಿ ಗುಂಡಿನ ಚಕಮಕಿ ನಡೆದಿದೆ. ಇಬ್ಬರು ಬಿಎಸ್ಎಫ್ ಯೋಧರು ಸಾವನ್ನಪ್ಪಿದ್ದಾರೆ. ಮತ್ತು ಓರ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ಬಗ್ಗೆ ಈಟಿವಿ ಭಾರತ್ಗೆ ಪೊಲೀಸರು ಮಾಹಿತಿ ನೀಡಿದ್ದು, ಗಲಾಟೆಯಲ್ಲಿ ಹವಿಲ್ದಾರ್ ಸತ್ಬೀರ್ ಸಿಂಗ್ ನನ್ನು ಕೊಂದಿರುವ ಸಹೋದ್ಯೋಗಿ ಬಿಎಸ್ಎಫ್ ಕಾನ್ಸ್ಟೇಬಲ್ ಪ್ರತಾಪ್ ಸಿಂಗ್, ಬಳಿಕ ಇನ್ನೂ ಕೋಪಗೊಂಡು ಉಳಿದವರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದ್ದರು. ಹಿರಿಯ ಅಧಿಕಾರಿ ರಾಮ್ ಕುಮಾರ್ ಸಿಂಗ್ ಮೇಲೂ ಗುಂಡಿನ ದಾಳಿ ನಡೆಸಿದರು.
ಆದರೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಗಂಭೀರವಾಗಿ ಗಾಯಗೊಂಡರು. ಇದನ್ನು ಕಂಡು ಭಯಗೊಂಡ ಇತರರು ತಮ್ಮ ಪ್ರಾಣ ಉಳಿಸಿಕೊಳ್ಳಲು ಪ್ರತಾಪ್ ಸಿಂಗ್ ಮೇಲೆ ಪ್ರತಿದಾಳಿ ನಡೆಸಿದ ಪರಿಣಾಮ ಪ್ರತಾಪ್ ಸಿಂಗ್ ಕೂಡಾ ಸಾವನ್ನಪ್ಪಿದರು.
ಇದನ್ನೂ ಓದಿ: ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು, ಆಂತರಿಕ ವಿಷಯ: ಒಐಸಿಗೆ ಭಾರತ ಖಡಕ್ ಸಂದೇಶ
ಗಡಿಯಲ್ಲಿ ಕಾನ್ಸ್ಟೇಬಲ್ ಪ್ರತಾಪ್ ಸಿಂಗ್, ಹವಿಲ್ದಾರ್ ಸತ್ಬೀರ್ ಸಿಂಗ್ ಜೊತೆ ಗಸ್ತು ತಿರುಗುತ್ತಿದ್ದಾಗ ಕೆಲವು ಕಾರಣಗಳಿಂದ ತೀವ್ರ ವಾಗ್ವಾದ ನಡೆದು ಹವಿಲ್ದಾರ್ ಸತ್ಬೀರ್ ಸಿಂಗ್ ಮೇಲೆ ಪ್ರತಾಪ್ ಸಿಂಗ್ ಗುಂಡು ಹಾರಿಸಿದ್ದಾರೆ. ಕೋಪದಲ್ಲಿದ್ದ ಪ್ರತಾಪ್ ಸಿಂಗ್ ಇತರರ ಮೇಲೂ ಗುಂಡು ಹಾರಿಸಲು ಪ್ರಾರಂಭಿಸಿದ್ದಾರೆ. ಆಗ ಇತರ ಯೋಧರು ಪ್ರತಿದಾಳಿ ನಡೆಸಿದ್ದಾರೆ. ಈ ವೇಳೆ ಪ್ರತಾಪ್ ಸಿಂಗ್ ಸಾವನ್ನಪ್ಪಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ರಾಮ್ ಕುಮಾರ್ ಸಿಂಗ್ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹತರಾದ ಇಬ್ಬರು ಬಿಎಸ್ಎಫ್ ಯೋಧರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಎಸ್ಡಿಪಿಒ ರಾಜು ರಿಯಾಂಗ್ ಮಾಹಿತಿ ನೀಡಿದರು.