ಬೆಂಗಳೂರು: ಮೈಕ್ರೋಬ್ಲಾಗಿಂಗ್ ಸಾಮಾಜಿಕ ಮಾಧ್ಯಮ ವೆಬ್ಸೈಟ್ ಟ್ವಿಟರ್ ದೇಶದ ಕಾನೂನುಗಳನ್ನು ಧಿಕ್ಕರಿಸುತ್ತಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಆರೋಪಿಸಿದೆ. ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 8 ರಂದು ನಿಗದಿಪಡಿಸಲಾಗಿದೆ. ಅರ್ಜಿದಾರರು ಉದ್ದೇಶಪೂರ್ವಕವಾಗಿ ದೇಶದ ಕಾನೂನುಗಳನ್ನು ಪಾಲಿಸುತ್ತಿಲ್ಲ ಮತ್ತು ಅವುಗಳನ್ನು ಧಿಕ್ಕರಿಸುತ್ತಿದ್ದಾರೆ ಎಂದು ಗುರುವಾರ ಕರ್ನಾಟಕ ಹೈಕೋರ್ಟ್ಗೆ ಸಲ್ಲಿಸಿದ 101 ಪುಟಗಳ ಆಕ್ಷೇಪಣೆಗಳ ಹೇಳಿಕೆಯಲ್ಲಿ ಸಚಿವಾಲಯ ಆರೋಪಿಸಿದೆ.
ಕಂಟೆಂಟ್ ತೆಗೆದು ಹಾಕುವ ಮೊದಲು ಕಂಟೆಂಟ್ ಹಾಕಿದವರಿಗೆ ನೋಟಿಸ್ ನೀಡಲಾಗಿಲ್ಲ. ಆದಾಗ್ಯೂ, ಟ್ವಿಟರ್ ಮಧ್ಯವರ್ತಿ ಆಗಿರುವುದರಿಂದ ಈ ಬಗ್ಗೆ ಬಳಕೆದಾರರಿಗೆ ತಿಳಿಸುವುದು ಅದರ ಜವಾಬ್ದಾರಿಯಾಗಿದೆ ಎಂದು ಸರ್ಕಾರ ತನ್ನ ಆಕ್ಷೇಪಣೆಯಲ್ಲಿ ಹೇಳಿದೆ. ದೇಶದ ಭದ್ರತೆಯಲ್ಲಿ ಟ್ವಿಟರ್ ಯಾವುದೇ ಪಾತ್ರವನ್ನು ವಹಿಸುವುದಿಲ್ಲ ಎಂದು ಸರ್ಕಾರ ತಿಳಿಸಿದೆ.
2ನೇ ಸಂಖ್ಯೆಯ ಪ್ರತಿವಾದಿಯನ್ನು ಸೂಕ್ತವಾಗಿ ಅನುಸರಣೆ ಮಾಡಿದ ನಂತರ ಮತ್ತು 27.06.2022ರಂದು ಶೋಕಾಸ್ ನೋಟಿಸ್ ನೀಡಿದ ನಂತರ, ಪ್ರತಿವಾದಿಗಳು ತಮಗೆ ಮಾತ್ರ ಗೊತ್ತಿರುವ ಕಾರಣಗಳಿಗಾಗಿ ಬ್ಲಾಕ್ ಮಾಡುವ ನಿಯಮಗಳನ್ನು ಅನುಸರಿಸಲಾರಂಭಿಸಿದ್ದಾರೆ. 39 ಯುಆರ್ಎಲ್ ಗಳು ಸೇರಿದಂತೆ ಇನ್ನು ಹಲವಾರು ಬ್ಲಾಕಿಂಗ್ ಸೂಚನೆಗಳನ್ನು ಟ್ವಿಟರ್ ಪ್ರಶ್ನಿಸಿದೆ. ಸರ್ಕಾರದ ಕಂಟೆಂಟ್ ತೆಗೆದುಹಾಕುವ ಸೂಚನೆಗಳಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಟ್ವಿಟರ್ ಜೂನ್ನಲ್ಲಿ ವಾದಿಸಿತ್ತು.
ಸಾರ್ವಜನಿಕ ಸುವ್ಯವಸ್ಥೆಯ ಸಮಸ್ಯೆ ಉದ್ಭವಿಸಿದಾಗ ಕ್ರಮ ಕೈಗೊಳ್ಳಲು ಸರ್ಕಾರ ಜವಾಬ್ದಾರಿಯಾಗಿರುತ್ತದೆ ಹೊರತು ಸಾಮಾಜಿಕ ಮಾಧ್ಯಮವಲ್ಲ. ಆದ್ದರಿಂದ, ಪೋಸ್ಟ್ ಮಾಡಲಾದ ಕಂಟೆಂಟ್ ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆ ಸಮಸ್ಯೆಗಳನ್ನು ಉಂಟುಮಾಡುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಸಾಮಾಜಿಕ ಮಾಧ್ಯಮ ವೇದಿಕೆಗಳು ಅವಕಾಶ ನೀಡಬೇಕು ಎಂದು ಕೇಂದ್ರ ಹೇಳಿದೆ. ರಾಜಕೀಯ ಟ್ವೀಟ್ಗಳನ್ನು ತೆಗೆದುಹಾಕಲು ತಿಳಿಸಲಾಗಿದೆ ಎಂಬ ವಿಚಾರ ಬಂದಾಗ, ಪರಿಶೀಲಿಸದ ಖಾತೆಗಳನ್ನು ನಿರ್ಬಂಧಿಸಲು ಮಾತ್ರ ಸೂಚಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಆನ್ಲೈನ್ ಪ್ಲಾಟ್ಫಾರ್ಮ್ಗಳು ರೂಪಿಸುವ ಯಾವುದೇ ಗೌಪ್ಯತೆ ನೀತಿ ಅಥವಾ ನಿಯಮಗಳು ಮಾಹಿತಿ ತಂತ್ರಜ್ಞಾನ ಕಾಯಿದೆ 2000ಕ್ಕೆ ಒಳಪಟ್ಟಿರುತ್ತವೆ ಎಂದು ಕೇಂದ್ರವು ಹೇಳಿದೆ. ದೇಶದಲ್ಲಿ ಸೇವೆಗಳನ್ನು ಒದಗಿಸುವ ವಿದೇಶಿ ಪ್ಲಾಟ್ಫಾರ್ಮ್ಗಳು ಭಾರತೀಯ ಕಾನೂನುಗಳು ಮತ್ತು ನಿಯಮಗಳು ತಮಗೆ ಅನ್ವಯಿಸುವುದಿಲ್ಲ ಎಂದು ಹೇಳಲು ಅರ್ಹತೆ ಹೊಂದಿರುವುದಿಲ್ಲ. ಹಾಗೆ ಹೇಳುವುದು ಕಾನೂನುಬದ್ಧವಾಗಿ ಅಸಮರ್ಥನೀಯ ಎಂದು ಅದು ಹೇಳಿದೆ. ಟ್ವಿಟರ್ ಭಾರತದ ಪ್ರಜೆಯಲ್ಲ ಹಾಗೂ ಅದೇ ಕಾರಣದಿಂದ ಪರಿಹಾರ ಪಡೆಯಲು ಅರ್ಹತೆ ಹೊಂದಿಲ್ಲದ ಕಾರಣ ಅರ್ಜಿಯನ್ನು ವಜಾಗೊಳಿಸುವಂತೆಯೂ ಆಕ್ಷೇಪಣೆಯಲ್ಲಿ ಮನವಿ ಮಾಡಲಾಗಿದೆ.
ಈ ವಿಷಯಗಳು ದೇಶದಲ್ಲಿ ಶಾಂತಿಯನ್ನು ಹಾಳುಮಾಡುವ ಸಾಧ್ಯತೆಗಳಿವೆ. ಹೀಗಾಗಿ, ದೇಶದಲ್ಲಿ ಸಾರ್ವಜನಿಕ ಸುವ್ಯವಸ್ಥೆ ಹಾಳಾಗುವ ಪರಿಸ್ಥಿತಿಯನ್ನು ತಡೆಗಟ್ಟಲು ಆರಂಭಿಕ ಹಂತದಲ್ಲಿ ಇಂಥ ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳನ್ನು ಪತ್ತೆಹಚ್ಚುವುದು ಮತ್ತು ನಿರ್ಬಂಧಿಸುವುದು ಅತ್ಯಗತ್ಯವಾಗಿದೆ ಎಂದು ಆಕ್ಷೇಪಣೆಯಲ್ಲಿ ಹೇಳಲಾಗಿದೆ.
ಇದನ್ನು ಓದಿ: ತಪ್ಪಾಗಿ ಮಾಡಿದ ಟ್ವೀಟ್ ಡಿಲೀಟ್ ಅಲ್ಲ ಎಡಿಟ್ ಮಾಡಿ.. ಶೀಘ್ರವೇ ಸಿಗಲಿದೆ ಪರಿಷ್ಕರಿಸುವ ಫೀಚರ್