ನವದೆಹಲಿ : ದೆಹಲಿ ವಿಧಾನಸಭೆಯಲ್ಲಿ ಗುರುವಾರ ಸುರಂಗದಂತಹ ರಚನೆ ಪತ್ತೆಯಾಗಿದೆ. ಈ ಸುರಂಗವು ದೆಹಲಿ ವಿಧಾನಸಭೆಯಿಂದ ಕೆಂಪುಕೋಟೆಗೆ ಸಂಪರ್ಕ ಕಲ್ಪಿಸುತ್ತದೆ. ಬ್ರಿಟಿಷ್ ಕಂಪನಿ ಸರ್ಕಾರ, ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸುವಾಗ ಜನರಿಂದ ಪ್ರತೀಕಾರದಂಥಹ ಕ್ರಮಗಳಿಂದ ತಪ್ಪಿಸಿಕೊಳ್ಳಲು ಈ ಸುರಂಗವನ್ನು ಬಳಸುತ್ತಿದ್ದರು ಎಂದು ದೆಹಲಿ ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಎಎನ್ಐಗೆ ಮಾಹಿತಿ ನೀಡಿದ್ದಾರೆ.
![ದೆಹಲಿ ವಿಧಾನಸಭೆಯಿಂದ ಲಾಲ್ ಕಿಲಾಗೆ ಸಂಪರ್ಕಿಸುವ ಸುರಂಗ ಮಾರ್ಗ ಪತ್ತೆ.. ಇದರ ಹಿಂದಿದೆ ಆಸಕ್ತಿಕರ ಸಂಗತಿ..](https://etvbharatimages.akamaized.net/etvbharat/prod-images/12957737_dehalijpg.jpg)
ಈ ಬಗ್ಗೆ ಮತ್ತಷ್ಟು ಮಾಹಿತಿ ನೀಡಿರುವ ಅವರು, ನಾನು 1993ರಲ್ಲಿ ಶಾಸಕನಾದಾಗ ಕೆಂಪುಕೋಟೆಯವರೆಗೆ ಇರುವ ಸುರಂಗ ಮಾರ್ಗದ ಬಗ್ಗೆ ಕೇಳಿದ್ದೆನು. ಅದರ ಇತಿಹಾಸವನ್ನು ಹುಡುಕಲು ಪ್ರಯತ್ನಿಸಿದ್ದು, ಮಾಹಿತಿ ಸ್ಪಷ್ಟವಾಗಿರಲಿಲ್ಲ ಅಂತಾ ರಾಮ್ ನಿವಾಸ್ ಗೋಯೆಲ್ ಹೇಳಿದ್ದಾರೆ.
![ದೆಹಲಿ ವಿಧಾನಸಭೆಯಿಂದ ಲಾಲ್ ಕಿಲಾಗೆ ಸಂಪರ್ಕಿಸುವ ಸುರಂಗ ಮಾರ್ಗ ಪತ್ತೆ.. ಇದರ ಹಿಂದಿದೆ ಆಸಕ್ತಿಕರ ಸಂಗತಿ..](https://etvbharatimages.akamaized.net/etvbharat/prod-images/12957737_dehlii.jpg)
ಈಗ ನಾವು ಸುರಂಗದ ಆರಂಭವನ್ನು ಮಾತ್ರವೇ ನೋಡುತ್ತಿದ್ದೇವೆ. ಮೆಟ್ರೋ ಯೋಜನೆಗಳು ಮತ್ತು ಒಳಚರಂಡಿ ಸ್ಥಾಪನೆಯಿಂದಾಗಿ ಸುರಂಗದ ಎಲ್ಲಾ ಮಾರ್ಗಗಳು ನಾಶವಾಗಿರುವುದರಿಂದ, ಅದನ್ನು ಮತ್ತಷ್ಟು ಉತ್ಖನನ ಮಾಡುತ್ತಿಲ್ಲ ಎಂದು ಗೋಯೆಲ್ ಸ್ಪಷ್ಟಪಡಿಸಿದ್ದಾರೆ.
1912ರಲ್ಲಿ ಕೋಲ್ಕತ್ತಾದಿಂದ ದೆಹಲಿಗೆ ರಾಜಧಾನಿಯನ್ನು ಬದಲಾಯಿಸಿದ ನಂತರ ಈಗಿರುವ ದೆಹಲಿ ವಿಧಾನಸಭೆಯನ್ನು ಕೇಂದ್ರ ಶಾಸಕಾಂಗ ಸಭೆಯಾಗಿ ಬಳಸಲಾಗುತ್ತಿತ್ತು. ನಂತರ 1926ರಲ್ಲಿ ಇದನ್ನು ನ್ಯಾಯಾಲಯವನ್ನಾಗಿ ರೂಪಿಸಲಾಯಿತು. ಇದೇ ಸುರಂಗದ ಮೂಲಕ ಸ್ವಾತಂತ್ರ್ಯ ಹೋರಾಟಗಾರರನ್ನು ನ್ಯಾಯಾಲಯಕ್ಕೆ ಕರೆತರಲಾಗುತ್ತಿತ್ತು ಎಂದು ಗೋಯೆಲ್ ಮಾಹಿತಿ ನೀಡಿದ್ದಾರೆ.
ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ದೆಹಲಿ ವಿಧಾನಸಭೆ ಪ್ರಮುಖ ಪಾತ್ರ ಹೊಂದಿದೆ. ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಇದನ್ನು ಮತ್ತೆ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಗೋಯೆಲ್ ಹೇಳಿದ್ದಾರೆ. ಈಗಾಗಲೇ ಇರುವ ಗಲ್ಲು ಶಿಕ್ಷೆಯ ಕೋಣೆಯನ್ನೂ ಸ್ಮಾರಕವನ್ನಾಗಿ ರೂಪಿಸುವ ಇರಾದೆಯನ್ನು ವ್ಯಕ್ತಪಡಿಸಿದರು.
ಇದನ್ನೂ ಓದಿ: ಒಳ ಉಡುಪಿನಲ್ಲೇ ರೈಲಿನೊಳಗೆ ತಿರುಗುತ್ತಿರುವ ಜೆಡಿಯು ಶಾಸಕ : ಫೋಟೋ ವೈರಲ್