ನವದೆಹಲಿ: ಆಂಧ್ರಪ್ರದೇಶ ಮರು ವಿಂಗಡನೆ ವಿಧೇಯಕವನ್ನು ಅಂಗೀಕರಿಸುವ ಕುರಿತು ಸದನದಲ್ಲಿ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಹಕ್ಕುಚ್ಯುತಿ ಮಂಡನೆಯನ್ನು ಸಭಾಪತಿ ಅಂಗೀಕರಿಸಬೇಕು ಎಂದು ಒತ್ತಾಯಿಸಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಸಂಸದರು ಗುರುವಾರ ರಾಜ್ಯಸಭೆಯಿಂದ ಸಭಾತ್ಯಾಗ ಮಾಡಿದರು.
ಮೊನ್ನೆ ಮಂಗಳವಾರ ಸಂಸತ್ನಲ್ಲಿ ರಾಷ್ಟ್ರಪತಿ ಭಾಷಣಕ್ಕೆ ಧನ್ಯವಾದ ಹೇಳುವ ವೇಳೆ ಪಿಎಂ ಮೋದಿ ಅವರು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ವಿಭಜನೆ ಕುರಿತು ಟೀಕಿಸಿದ್ದರು. ಇದರ ವಿರುದ್ಧ ಸಿಡಿದೆದ್ದ ಟಿಆರ್ಎಸ್ ಸಂಸದರು, ಪ್ರಧಾನಿ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಆಗ್ರಹಿಸಿ ಸದನದ ಬಾವಿಗೆ ಇಳಿದರು. ಆದರೆ, ಶೂನ್ಯವೇಳೆಯಲ್ಲಿ ಸಭಾಪತಿ ಈ ಕುರಿತ ಚರ್ಚೆಗೆ ಅವಕಾಶ ನೀಡಲಿಲ್ಲ.
ಇದನ್ನೂ ಓದಿ: ದೇಶದ ವಿರುದ್ಧ ಸುಳ್ಳು ಸುದ್ದಿ ಹರಡಿದ 60ಕ್ಕೂ ಅಧಿಕ ಸೋಷಿಯಲ್ ಮೀಡಿಯಾ ಖಾತೆಗಳು ಬ್ಯಾನ್- ಕೇಂದ್ರ ಸರ್ಕಾರ
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಟಿಆರ್ಎಸ್ ಸಂಸದರು, ಪ್ರಧಾನಿ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಆಗ್ರಹಿಸಿ ಇಂದು ಸದನದಿಂದ ಹೊರ ನಡೆದಿದ್ದಾರೆ. ಮಂಗಳವಾರ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಪಿಎಂ ಮೋದಿ ಹೇಳೀಕೆಗೆ ಆಕ್ಷೇಪ ವ್ಯಕ್ತಪಡಿಸಿ, ಟಿಆರ್ಎಸ್ಗೆ ಬೆಂಬಲ ನೀಡಿದ್ದರು.