ಚೆನ್ನೈ: ತಮಿಳುನಾಡಿನ ಕುಂಭಕೋಣಂ ದೇವಾಲಯದಿಂದ ಕಳುವು ಮಾಡಲಾದ ಪುರಾತನ ಕಾಳಿಂಗನರ್ತನ ಕೃಷ್ಣನ ಮೂರ್ತಿ ಸೇರಿದಂತೆ ಮೂರು ಪುರಾತನ ವಿಗ್ರಹಗಳು ಅಮೆರಿಕದ ಮ್ಯೂಸಿಯಂ ಅಥವಾ ಹರಾಜು ಕಂಪನಿಗಳಲ್ಲಿ ಪತ್ತೆಯಾಗಿವೆ ಎಂದು ತಮಿಳುನಾಡು ಸಿಐಡಿಯ ವಿಗ್ರಹ ತನಿಖಾ ವಿಭಾಗ ತಿಳಿಸಿದೆ.
ಕುಂಭಕೋಣಂನ ಸುಂದರ ಪೆರುಮಾಳ್ಕೋವಿಲ್ ಗ್ರಾಮದ ಅರುಲ್ಮಿಗು ಸೌಂದರರಾಜ ಪೆರುಮಾಳ್ ದೇವಸ್ಥಾನದಿಂದ ಕಾಳಿಂಗನರ್ತನ ಕೃಷ್ಣ, ವಿಷ್ಣು ಮತ್ತು ಶ್ರೀದೇವಿಯ ಕಂಚಿನ ವಿಗ್ರಹಗಳನ್ನು ಕಳವು ಮಾಡಲಾಗಿದೆ ಎಂದು ಅದು ಹೇಳಿದೆ.
ಸುಮಾರು 60 ವರ್ಷಗಳ ಹಿಂದೆ ದೇವಾಲಯದಲ್ಲಿನ ಕಾಳಿಂಗ ನರ್ತನ ಕೃಷ್ಣ, ವಿಷ್ಣು ಮತ್ತು ಶ್ರೀದೇವಿಯ ವಿಗ್ರಹಗಳನ್ನು ನಕಲಿ ವಿಗ್ರಹಗಳೊಂದಿಗೆ ಬದಲಾಯಿಸಲಾಗಿತ್ತು ಮತ್ತು ಇದು ಇಷ್ಟು ವರ್ಷಗಳಲ್ಲಿ ಯಾರ ಗಮನಕ್ಕೂ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಗ್ರಹಗಳು ಅಮೆರಿಕದ ವಸ್ತುಸಂಗ್ರಹಾಲಯ ಅಥವಾ ಹರಾಜು ಕಂಪನಿಗಳಲ್ಲಿವೆ ಎಂದು ತನಿಖೆಯಿಂದ ದೃಢಪಟ್ಟಿದೆ. ಸೌಂದರರಾಜ ಪೆರುಮಾಳ್ ದೇವಸ್ಥಾನದ ಪುರಾತನ ಮೂರ್ತಿಗಳನ್ನು ಮರುಪ್ರತಿಷ್ಠಾಪಿಸಲು ಮೂರೂ ವಿಗ್ರಹಗಳನ್ನು ತಮಿಳುನಾಡಿಗೆ ಹಿಂದಿರುಗಿಸುವಂತೆ ಕೋರಿ ಸಿಐಡಿ ಪತ್ರ ಬರೆದಿದೆ ಎಂದು ವಿಗ್ರಹ ತನಿಖಾ ವಿಭಾಗದ ಡಿಜಿಪಿ ಕೆ. ಜಯಂತ್ ಮುರಳಿ ತಿಳಿಸಿದ್ದಾರೆ.
ಕಾಳಿಂಗನರ್ತನ ಕೃಷ್ಣನ ವಿಗ್ರಹ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಏಷ್ಯನ್ ಆರ್ಟ್ ಮ್ಯೂಸಿಯಂನಲ್ಲಿ ಪತ್ತೆಯಾಗಿದ್ದರೆ, ಟೆಕ್ಸಾಸ್ನ ಕಿಂಬೆಲ್ ಆರ್ಟ್ ಮ್ಯೂಸಿಯಂನಲ್ಲಿ ವಿಷ್ಣುವಿನ ವಿಗ್ರಹ ಮತ್ತು ಫ್ಲೋರಿಡಾದ ಹಿಲ್ಸ್ ಹರಾಜು ಗ್ಯಾಲರಿಯಲ್ಲಿ ಶ್ರೀದೇವಿಯ ವಿಗ್ರಹವಿದೆ ಎಂದು ಸಿಐಡಿ ಪ್ರಕಟಣೆ ತಿಳಿಸಿದೆ.
ಫೆಬ್ರವರಿ 12, 2020 ರಂದು ಅರುಲ್ಮಿಗು ಸೌಂದರರಾಜ ಪೆರುಮಾಳ್ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೆಎ ರಾಜಾ ಅವರು ನೀಡಿದ ದೂರಿನ ಮೇರೆಗೆ ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಯಾರೋ ದುಷ್ಕರ್ಮಿಗಳು ತಿರುಮಂಗೈ ಆಳ್ವಾರರ ವಿಗ್ರಹವನ್ನು ಕದ್ದು ನಕಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ ಎಂದು ಅಧಿಕಾರಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಈ ವಿಗ್ರಹವು ಸುಮಾರು 60 ರಿಂದ 65 ವರ್ಷಗಳ ಹಿಂದೆ ಕಳ್ಳತನವಾಗಿದ್ದು, ಆಗಲೇ ಅದರ ಪ್ರತಿಕೃತಿಯನ್ನು ಅಳವಡಿಸಲಾಗಿದೆ ಎಂದು ಪೊಲೀಸ್ ಉಪಾಧೀಕ್ಷಕ ಪಿ ಚಂದ್ರಶೇಖರನ್ ಅವರು ತನಿಖೆಯ ಸಮಯದಲ್ಲಿ ಪತ್ತೆ ಮಾಡಿದ್ದಾರೆ.
ಇದನ್ನೂ ಓದಿ: ತಮಿಳುನಾಡಿನಿಂದ ಕಳ್ಳತನವಾಗಿದ್ದ ಸಾವಿರ ವರ್ಷ ಹಳೆಯ ಪಾರ್ವತಿ ವಿಗ್ರಹ ನ್ಯೂಯಾರ್ಕ್ನಲ್ಲಿ ಪತ್ತೆ