ರಾಂಚಿ: ಬೆಂಗಳೂರಿನಿಂದ ಜಾರ್ಖಂಡ್ನ ರಾಂಚಿಗೆ ಕರೆದೊಯ್ದಿದ್ದ ಶಿವ ಎಂಬ ಹೆಸರಿನ 10 ವರ್ಷದ ಹುಲಿಯು ಅನಾರೋಗ್ಯದಿಂದ ಮೃತಪಟ್ಟಿದೆ.
ಬಿರ್ಸಾ ಮುಂಡಾ ಮೃಗಾಲಯದಲ್ಲಿದ್ದ ಶಿವ, ಕಳೆದ ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ. ಪಶು ವೈದ್ಯಕೀಯ ಕಾಲೇಜಿನ ಡಾ.ಪ್ರವೀಣ್ ಕುಮಾರ್ ಹಾಗೂ ಮೃಗಾಲಯದ ಡಾ.ಓಂ ಪ್ರಕಾಶ್ ಸಾಹು, ಮಣಿಕ್ ಪಾಲಿಕ್ ನೇತೃತ್ವದ ತಂಡ ನಿರಂತರವಾಗಿ ಚಿಕಿತ್ಸೆ ನೀಡುತ್ತಿತ್ತು. ಪಶುವೈದ್ಯಕೀಯ ಕಾಲೇಜು ರೋಗಶಾಸ್ತ್ರ ವಿಭಾಗದ ಎಚ್ಒಡಿ ಡಾ.ಎಂ.ಕೆ.ಗುಪ್ತಾ ಹುಲಿಯ ರಕ್ತ ಪರೀಕ್ಷಿಸಿದ್ದರು. ಇದರಲ್ಲಿ ಮೂತ್ರಪಿಂಡ ಮತ್ತು ಪಿತ್ತಜನಕಾಂಗದಲ್ಲಿ ಸೋಂಕು ಕಂಡು ಬಂದಿದೆ. ಜತೆಗೆ ಕೊರೊನಾದಿಂದ ಹುಲಿ ಸತ್ತಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಕಳೇಬರದ ಮಾದರಿಗಳನ್ನು ಸಂಗ್ರಹಿಸಿ ಆರ್ಟಿಪಿಸಿಆರ್ ಪರೀಕ್ಷೆಗಾಗಿ ಬರೇಲಿಗೆ ಕಳಿಸಲಾಗಿದೆ.
ಲಾಕ್ಡೌನ್ ಹಿನ್ನೆಲೆ ಮೃಗಾಲಯವನ್ನು ಮುಚ್ಚಲಾಗಿದೆ. ಒಂದು ವೇಳೆ ಹುಲಿಯು ಕೊರೊನಾದಿಂದ ಮೃತಪಟ್ಟಿದ್ದರೆ, ಇತರ ಪ್ರಾಣಿಗಳ ಜೀವಕ್ಕೂ ಕಂಟಕವಿದೆ.
ಹುಲಿಗೆ ಮೂರು ವರ್ಷವಿದ್ದಾಗ ಬೆಂಗಳೂರಿನ ಕರೆತರಲಾಯಿತು. ಶಿವನು 2011ರ ಮೇ 11 ರಂದು ಬನ್ನೇರುಘಟ್ಟ ಮೃಗಾಲಯದಲ್ಲಿ ಜನಿಸಿದ್ದ. ಅವನನ್ನು 2014 ರ ನವೆಂಬರ್ 24 ರಂದು ರಾಂಚಿಯ ಬಿರ್ಸಾ ಮುಂಡಾ ಮೃಗಾಲಯಕ್ಕೆ ಕರೆ ತರಲಾಯಿತು. ಶಿವನ ತಾಯಿಯ ಹೆಸರು ಮೇನಕಾ, ತಂದೆಯ ಹೆಸರು ಮೋಹನ ಎಂದು ತಿಳಿದು ಬಂದಿದೆ