ನವದೆಹಲಿ: ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸುವ ಶಿಕ್ಷಣ ಸಂಸ್ಥೆಗಳ ಅಧಿಕಾರವನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾದ ಅರ್ಜಿ ವಿಚಾರಣೆಯನ್ನು ಮುಂದೂಡಲು ಕೋರಿದ ಅರ್ಜಿದಾರರ ಬಗ್ಗೆ ಸುಪ್ರೀಂಕೋರ್ಟ್ ಬೇಸರ ವ್ಯಕ್ತಪಡಿಸಿದೆ. ಅಲ್ಲದೇ ಇಂದು ನಡೆಯಬೇಕಿದ್ದ ವಿಚಾರಣೆಯನ್ನು ಸೆಪ್ಟೆಂಬರ್ 5 ಕ್ಕೆ ಮುಂದೂಡಿದೆ.
ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ, ಈ ಹಿಂದೆ ಅರ್ಜಿದಾರರು ಪ್ರಕರಣವನ್ನು ತುರ್ತು ವಿಚಾರಣೆ ನಡೆಸಬೇಕು ಎಂದು ಕೋರಿದ್ದರು. ಕೇಸನ್ನು ತುರ್ತು ಪಟ್ಟಿಯಲ್ಲಿ ಸೇರಿಸಿ ವಿಚಾರಣೆ ನಡೆಸುತ್ತಿರುವಾಗ ಮುಂದೂಡುವಂತೆ ಕೋರುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿತು.
ಕರ್ನಾಟಕ ಸರ್ಕಾರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಅರ್ಜಿಗಳ ವಿಚಾರಣೆಯನ್ನು ಮುಂದೂಡುವಂತೆ ಕೋರಿರುವ ಪತ್ರವನ್ನು ಕೋರ್ಟ್ ಮುಂದೆ ಹಾಜರುಪಡಿಸಿದಾಗ ಪೀಠ ಅಸಮಾಧಾನ ವ್ಯಕ್ತಪಡಿಸಿತು.
ಅರ್ಜಿದಾರರ ಪರ ವಕೀಲರು ಕೋರ್ಟ್ಗೆ ಬಂದಿಲ್ಲ. ಕೆಲವರು ಕರ್ನಾಟಕದವರೂ ಇದ್ದಾರೆ ಎಂದಾಗ, ಕರ್ನಾಟಕ ಕೇವಲ 2.5 ಗಂಟೆಗಳ ದೂರದ ಪ್ರಯಾಣವಲ್ಲವೇ ಎಂದು ಪ್ರಶ್ನಿಸಿತು. ಈ ಹಿಂದೆ ಅರ್ಜಿದಾರರೇ ಪ್ರಕರಣವನ್ನು ತುರ್ತು ವಿಚಾರಣೆಯನ್ನು ಬಯಸಿದ್ದರು. ಆದರೀಗ ಮುಂದೂಡಬೇಕೆಂದು ಕೋರಿರುವುದು ಸಮಂಜಸವಲ್ಲ ಎಂದು ಪೀಠ ಹೇಳಿತು.
ಅಲ್ಲದೇ, ವಿಚಾರಣೆ ಮುಂದೂಡಲು ಕೋರಿದ ಬಗ್ಗೆ ಪ್ರಶ್ನಿಸಿ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 5 ಕ್ಕೆ ಮುಂದೂಡಿತು.
ಓದಿ: ಬಹುಮತವಿದ್ದರೂ ಕೇಜ್ರಿವಾಲ್ ಇಂದು ವಿಶ್ವಾಸಮತ ಯಾಚನೆ.. ಬಿಜೆಪಿಗೆ ಸೆಡ್ಡು ಹೊಡೆಯುವ ತಂತ್ರ